ಸಿಐಸಿ ಮುಖ್ಯ ಮಾಹಿತಿ ಆಯುಕ್ತ ಸುಧೀರ್ ಭಾರ್ಗವ ಪ್ರಮಾಣ ವಚನ
Team Udayavani, Jan 1, 2019, 9:49 AM IST
ಹೊಸದಿಲ್ಲಿ : ಕೇಂದ್ರ ಮಾಹಿತಿ ಆಯೋಗ (ಸಿಐಸಿ) ದಲ್ಲಿ ಮುಖ್ಯ ಮಾಹಿತಿ ಆಯುಕ್ತರಾಗಿ ಸುಧೀರ್ ಭಾರ್ಗವ ಅವರು ಇಂದು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.
ರಾಷ್ಟ್ರಪತಿ ಭವನದಲ್ಲಿ ಏರ್ಪಟ್ಟ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರು ಭಾರ್ಗವ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಭಾರ್ಗವ ಅವರು ಸಿಐಸಿ ನಲ್ಲಿ ಮಾಹಿತಿ ಆಯುಕ್ತರಾಗಿ ದುಡಿಯುತ್ತಿದ್ದರು.
ಮಾಜಿ ಐಎಫ್ಎಸ್ ಅಧಿಕಾರಿ ಯಶವರ್ಧನ್ ಕುಮಾರ್ ಸಿನ್ಹಾ, ಪರೋಕ್ಷ ತೆರಿಗೆಗಳು ಮತ್ತು ಅಬಕಾರಿ ಕೇಂದ್ರ ಮಂಡಳಿಯ ಹಿಂದಿನ ಅಧ್ಯಕ್ಷ ವನಜಾ ಎನ್ ಶರಣಾ, ಮಾಜಿ ಐಎಎಸ್ ಅಧಿಕಾರಿ ನೀರಜ್ ಕುಮಾರ್ ಗುಪ್ತಾ ಮತ್ತು ಹಿಂದಿನ ಕಾನೂನು ಕಾರ್ಯದರ್ಶಿ ಸುರೇಶ್ ಚಂದ್ರ ಅವರನ್ನು ಮಾಹಿತಿ ಆಯುಕ್ತರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸಿಐಸಿ ಅಧಿಕಾರಿಗಳು ತಿಳಿಸಿದ್ದಾರೆ.