ಸುಕ್ಮಾ ದಾಳಿಗೆ ಪ್ರತೀಕಾರ; ಸಿಆರ್ ಪಿಎಫ್ ದಾಳಿಗೆ 15 ನಕ್ಸಲೀಯರು ಬಲಿ
Team Udayavani, May 17, 2017, 12:53 PM IST
ರಾಯ್ ಪುರ್: ಸಿಆರ್ ಪಿಎಫ್ ಯೋಧರನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರ ಎಂಬಂತೆ ಬಸ್ತಾರ್ ಜಿಲ್ಲೆಯ ದಾಂತೇವಾಡಾದಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿನ ಎನ್ ಕೌಂಟರ್ ಗೆ 15 ಮಂದಿ ನಕ್ಸಲೀಯರು ಬಲಿಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇತ್ತೀಚೆಗೆ ನಕ್ಸಲೀಯರ ಪಡೆ ಸಿಆರ್ ಪಿಎಫ್ ಯೋಧರ ಮೇಲೆ ನಡೆಸಿದ ದಾಳಿಯಲ್ಲಿ 25 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಸಿಆರ್ ಪಿಎಫ್ ಮತ್ತು ಕೋಬ್ರಾ, ಸ್ಪೆಶಲ್ ಟಾಸ್ಕ್ ಪೋರ್ಸ್ ಮತ್ತು ಜಿಲ್ಲಾ ಮೀಸಲು ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ಬುಧವಾರ ಮಾವೋವಾದಿಗಳು ಭದ್ರತಾ ಪಡೆಯ ಶಿಬಿರದ ಮೇಲೆ ದಾಳಿ ನಡೆಸಿದ್ದವು. ಛತ್ತೀಸ್ ಗಢದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾದ ಜೊತೆ ಮಾತನಾಡುತ್ತ, ಮಂಗಳವಾರ ರಾತ್ರಿ ನಮ್ಮ ಯೋಧರ ಪಡೆ ದಟ್ಟಾರಣ್ಯದೊಳಕ್ಕೆ ನುಗ್ಗಿ ಕಾರ್ಯಾಚರಣೆ ಕೈಗೊಂಡಿದೆ. ಕೋಬ್ರಾ, ಸ್ಪೆಶಲ್ ಪೋರ್ಸ್ ಟಾಸ್ಕ್ ನ ಗುಂಡಿನ ದಾಳಿಗೆ ಮಾವೋವಾದಿಗಳು ಬಲಿಯಾಗಿರುವುದಾಗಿ ವಿವರಿಸಿದ್ದಾರೆ.
ನಮ್ಮ ಆಪರೇಶನ್ ಯಶಸ್ವಿಯಾಗಿರುವುದಾಗಿ ಡಾಂತೇವಾಡ್ ಡಿಐಜಿ ಪಿ ಸುಂದೆರ್ರ ಅವರು ಹೇಳಿದ್ದು, ಜಂಟಿ ಕಾರ್ಯಾಚರಣೆ ಮೂಲಕ ನಕ್ಸಲೀಯರ ಅಟ್ಟಹಾಸಕ್ಕೆ ಅಂತ್ಯ ಹಾಡಲಾಗುವುದು ಎಂದು ಹೇಳಿದರು.