ಜು.7ಕ್ಕೆ ವಿಚಾರಣೆಗೆ ಹಾಜರಾಗಲು ತರೂರ್ ಗೆ ಸೂಚನೆ
Team Udayavani, Jun 6, 2018, 6:25 AM IST
ಹೊಸದಿಲ್ಲಿ: ಕಾಂಗ್ರೆಸ್ ನ ಹಿರಿಯ ನಾಯಕ ಶಶಿ ತರೂರ್ ಗೆ ದಿಲ್ಲಿಯ ಸ್ಥಳೀಯ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. 2014ರಲ್ಲಿ ಪತ್ನಿ ಸುನಂದಾ ಪುಷ್ಕರ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಆಪಾದಿತ ವ್ಯಕ್ತಿ ಎಂಬ ನೆಲೆಯಲ್ಲಿ ಜುಲೈ 7ರಂದು ವಿಚಾರಣೆಗೆ ಹಾಜರಾಗುವಂತೆ ಕೇಂದ್ರದ ಮಾಜಿ ಸಚಿವರಿಗೆ ಸೂಚಿಸಲಾಗಿದೆ. ಅವರ ವಿರುದ್ಧದ ಆರೋಪಗಳಿಗೆ ಸಾಕಷ್ಟು ಪುರಾವೆಗಳಿವೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚುವರಿ ಚೀಫ್ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಸಮೀರ್ ವಿಶಾಲ್ ಮಂಗಳವಾರ ವಿಚಾರಣೆ ನಡೆಸಿ, ‘ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿರುವ ಅಂಶಗಳು ಮತ್ತು ಪ್ರಾಸಿಕ್ಯೂಟರ್ ಮಂಡಿಸಿದ ವಾದಗಳನ್ನು ಆಲಿಸಿದೆ. ಸುನಂದಾ ಪುಷ್ಕರ್ ರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪ ಶಶಿ ತರೂರ್ ಮೇಲೆ ಇದ್ದು, ಸಾಕ್ಷ್ಯಗಳೂ ಅದಕ್ಕೆ ಪೂರಕವಾಗಿವೆ ಎನ್ನುವುದು ಕಂಡುಬರುತ್ತದೆ. ಹೀಗಾಗಿ ಅವರು ಈ ನ್ಯಾಯಾಲಯದ ಮುಂದೆ ಜು.7ರಂದು ವಿಚಾರಣೆಗೆ ಹಾಜರಾಗಬೇಕು’ ಎಂದು ಆದೇಶ ನೀಡಿದ್ದಾರೆ.
ಮೇ 14ರಂದು ಪೊಲೀಸರು ಶಶಿ ತರೂರ್ ಸುನಂದಾ ಪುಷ್ಕರ್ ಸಾವಿಗೆ ಕಾರಣ ಎಂದು ಆರೋಪಿಸಿದ್ದರು. 3 ಸಾವಿರ ಪುಟಗಳ ಆರೋಪ ಪಟ್ಟಿಯಲ್ಲಿ ಕೇಂದ್ರದ ಮಾಜಿ ಸಚಿವ ತರೂರ್ ಹೆಸರನ್ನು ಪ್ರಸ್ತಾವ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 28ರಂದು ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. 2014ರ ಜ. 17ರಂದು ಹೊಸದಿಲ್ಲಿಯ ಹೊಟೇಲ್ ನ ಕೊಠಡಿಯಲ್ಲಿ ಸುನಂದಾ ಪುಷ್ಕರ್ ಅನುಮಾನಾಸ್ಪದವಾಗಿ ಅಸುನೀಗಿದ್ದರು.
ಚಾರ್ಜ್ಶೀಟ್ ನಲ್ಲಿ ಉಲ್ಲೇಖವಾಗಿರುವ ಅಂಶ ಅಸಂಬದ್ಧವಾಗಿದೆ. ಅದರ ವಿರುದ್ಧ ನಾನು ಹೋರಾಟ ನಡೆಸುವೆ. ಅಂತಿಮವಾಗಿ ಸತ್ಯವೇ ಗೆಲ್ಲಲಿದೆ.
– ಶಶಿ ತರೂರ್, ಕೇಂದ್ರದ ಮಾಜಿ ಸಚಿವ