ಮತ್ತೆ ಟಿಎಂಸಿಗೆ ಸೇರಲಿದ್ದಾರೆಯೇ ಸುವೇಂದು ಅಧಿಕಾರಿ?
Team Udayavani, Oct 24, 2022, 9:15 PM IST
ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಅವರು ಇತ್ತೀಚೆಗೆ ಟಿಎಂಸಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದು, ಮತ್ತೆ ಟಿಎಂಸಿ ಸೇರಲಿದ್ದಾರೆಯೇ ಎನ್ನುವ ಚರ್ಚೆ ಆರಂಭವಾಗಿದೆ.
ಸುವೇಂದು ಶನಿವಾರ ಬೀರ್ಭೂಮ್ ಜಿಲ್ಲೆಯ ಬಾಮ್ನಿ ಕಾಳಿ ದೇಗುಲಕ್ಕೆ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿ ಸೂರಿ ನಗರ ಪಾಲಿಕೆಯ ಇಬ್ಬರು ಟಿಎಂಸಿ ಕೌನ್ಸಿಲರ್ಗಳೂ ಇದ್ದರು. ಈ ಮೂರೂ ನಾಯಕರು ದೇಗುಲದಲ್ಲಿ ಪರಸ್ಪರ ಮಾತನಾಡಿಕೊಂಡಿದ್ದಾರೆ.
ಆ ಫೋಟೋವನ್ನು ಸುವೇಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಕೌನ್ಸಿಲರ್ಗಳು ಪ್ರತಿಕ್ರಿಯಿಸಿದ್ದು, “ನಾವು ದೇವಸ್ಥಾನದಲ್ಲಿದ್ದಾಗ ಅವರೂ ಬಂದರು. ನಮ್ಮ ಪಕ್ಷದಲ್ಲಿದ್ದವರು ಎನ್ನುವ ಭಾವನೆಯಿಂದ ಮಾತನಾಡಿಸಿದ್ದೇವೆ’ ಎಂದಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಧ್ರುಬಾ ಸಹಾ ಅವರು ಪ್ರತಿಕ್ರಿಯಿಸಿದ್ದು, “ನಮ್ಮ ಪಕ್ಷ ಸೇರಲು ಟಿಎಂಸಿಯವರು ನಮ್ಮ ಹಿಂದೆ ಬಿದ್ದಿದ್ದಾರೆ’ ಎಂದಿದ್ದಾರೆ.