ಮುಂಬೈನಲ್ಲಿ ಕೆಸಿಆರ್- ಉದ್ಧವ್ ಠಾಕ್ರೆ ಭೇಟಿ; ಹಿಂದುತ್ವವೆಂದರೆ ಹಿಂಸೆಯಲ್ಲ: ಮಹಾ ಸಿಎಂ
Team Udayavani, Feb 21, 2022, 7:30 AM IST
ಮುಂಬೈ: ಬಿಜೆಪಿಯೇತರ ಮೈತ್ರಿಕೂಟ ರಚನೆಗೆ ಪ್ರಯತ್ನ ಮಾಡುತ್ತಿರುವ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ (ಕೆಸಿಆರ್)ಅವರಿಗೆ ಮಹಾರಾಷ್ಟ್ರ ಸಿಎಂ, ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಬೆಂಬಲ ಸಿಕ್ಕಿದೆ.
ಮುಂಬೈನಲ್ಲಿ ಇಬ್ಬರು ಮುಖ್ಯಮಂತ್ರಿಗಳು ಭಾನುವಾರ ಮಧ್ಯಾಹ್ನ ಜತೆಯಾಗಿ ಊಟ ಮಾಡಿದ್ದಾರೆ ಮತ್ತು ಮಾತುಕತೆ ನಡೆಸಿದ್ದಾರೆ. ಇಬ್ಬರು ನಾಯಕರೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿಯಿಂದ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದೆ. ಆ ಪಕ್ಷದ ಮುಖಂಡರು ಹಿಂದುತ್ವದ ಹೆಸರಿನಲ್ಲಿ ಕೀಳು ರಾಜಕೀಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಹೈದರಾಬಾದ್ ಅಥವಾ ಬೇರೊಂದು ಸ್ಥಳದಲ್ಲಿ ಕುರಿತು ಮೈತ್ರಿಕೂಟ ರಚನೆಯ ಬಗ್ಗೆ ವಿಸ್ತೃತ ಮಾತುಕತೆ ನಡೆಸಲಾಗುತ್ತದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಹೇಳಿದ್ದಾರೆ.
ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಕೀಳು ರಾಜಕೀಯ ನಡೆಸುತ್ತಿದೆ. ಹಿಂದುತ್ವ ಎಂದರೆ ಹಿಂಸೆ ಅಲ್ಲ. ಹೀಗೆಯೇ ಮುಂದುವರಿದರೆ ದೇಶದ ಭವಿಷ್ಯ ಏನು ಎಂದು ಠಾಕ್ರೆ ಪ್ರಶ್ನಿಸಿದರು.
ಇದನ್ನೂ ಓದಿ:ಮೋಸ್ಟ್ ರಿವ್ಯೂವ್ಡ್ ಪಟ್ಟಿಯಲ್ಲಿ ಸ್ಥಾನ ಪಡೆದ ಮೈಸೂರು ಅರಮನೆ
ಬಿಜೆಪಿಯೇತರ ಮೈತ್ರಿಕೂಟ ರಚಿಸುವ ಕೆಸಿಆರ್ ಹಂಬಲಕ್ಕೆ ಠಾಕ್ರೆ ಇಂಬನ್ನೂ ಕೊಟ್ಟರು. 2024ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮೊದಲು ಹತ್ತು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳಿರುವ ಮೈತ್ರಿಕೂಟ ರಚನೆಗೆ ಮುಂದಾಗಿದ್ದಾರೆ. ಅದಕ್ಕಾಗಿ ದೀದಿ ಈಗಾಗಲೇ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಜತೆಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.