ಮನೆಯ ಹಿರಿಯರಿಗಿನ್ನು ಮಕ್ಕಳೇ “ಗುರುಗಳು’
Team Udayavani, Nov 5, 2018, 9:10 AM IST
ಜೈಪುರ: ಮನೆಯಲ್ಲಿರುವ ಅನಕ್ಷರಸ್ಥ ಹಿರಿಯರಿಗೆ ಮಕ್ಕಳೇ ಕಲಿಸಿಕೊಡುವಂಥ ಹೊಸ ಅಭಿಯಾನವೊಂದನ್ನು ಸದ್ಯದಲ್ಲೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಆರಂಭಿಸಲಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಈ ಅಭಿಯಾನದಡಿ 6ರಿಂದ 10ನೇ ತರಗತಿ ವಿದ್ಯಾರ್ಥಿಗಳನ್ನು ಬಳಸಿಕೊಂಡು, ಮನೆಯಲ್ಲಿನ ಅನಕ್ಷರಸ್ಥ ಸದಸ್ಯರನ್ನು ಅಕ್ಷರಸ್ಥರನ್ನಾಗಿಸುವಂತೆ ಉತ್ತೇಜಿಸಲಾಗುತ್ತದೆ. “ಪಡ್ನಾ-ಲಿಖಾ°’ ಎಂಬ ಹೆಸರಿನ ಈ ಅಭಿಯಾನದಲ್ಲಿ ತಮ್ಮ ಹಿರಿಯರಿಗೆ ಮಕ್ಕಳೇ “ಗುರು’ಗಳಾಗಿರುತ್ತಾರೆ. ಅದಕ್ಕೆ ಬೇಕಾದ ಪರಿಕರಗಳನ್ನು ನಾವೇ ಮಕ್ಕಳಿಗೆ ಒದಗಿಸುತ್ತೇವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಜಾವಡೇಕರ್ ಜೈಪುರದ ಒಂದು ಕುಟುಂಬವನ್ನು ಭೇಟಿಯಾದ ವೇಳೆ ಆ ಮನೆಯ ಹಿರಿಯರಿಗೆ ಅಕ್ಷರಾಭ್ಯಾಸ ಮಾಡಿಸುವಂತೆ ಮಕ್ಕಳಿಗೆ ಸೂಚಿಸಿದರು. ನಂತರ, ಇದರ ಮೂಲಕ ಈ ಯೋಜನೆಗೆ ಅನೌಪಚಾರಿಕ ಚಾಲನೆ ನೀಡಿದ್ದೇನೆ. ಎರಡು ತಿಂಗಳಲ್ಲೇ ಇದು ಅಧಿಕೃತವಾಗಿ ಜಾರಿಗೆ ಬರಲಿದೆ ಎಂದರು.