ವಧುವಿಗಾಗಿ ಬಂದ ಒದೆ ತಿಂದ
Team Udayavani, Apr 22, 2018, 6:00 AM IST
ನವದೆಹಲಿ: ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿತ್ತು. “ತಾಳಿ ಕಟ್ಟುವ ಶುಭ ವೇಳೆ… ಕೈಯ್ಯಲ್ಲಿ ಹೂವಿನ ಮಾಲೆ’ ಹಾಡಿನಂತೆ ಇಬ್ಬರ ಕೈಯ್ಯಲ್ಲೂ ಹೂವಿನ ಹಾರಗಳಿದ್ದವು. ಇನ್ನೇನು ಗಟ್ಟಿ ಮೇಳ ಮೊಳಗಬೇಕು, ಅಷ್ಟರಲ್ಲಿ ಮೋಟಾರು ಬೈಕೊಂದರಲ್ಲಿ ಏಕಾಏಕಿ ಕಲ್ಯಾಣ ಮಂಟಪ ಪ್ರವೇಶಿಸಿದ ರಾಹುಲ್ ಎಂಬ ಯುವಕ ಸೀದಾ ಮದುವೆ ಮಂಟಪದತ್ತ ಧಾವಿಸಿ, ತಾನು ತಂದಿದ್ದ ಹೂಮಾಲೆಯೊಂದನ್ನು ವಧುವಿನತ್ತ ತೂರಿದ. ಅದು ಸೀದಾ ಹೋಗಿ ವಧುವಿನ ಕೊರಳಿಗೆ ಬಿತ್ತು! ತಕ್ಷಣ, ಹಸೆಮಣೆಯಿಂದ ಎದ್ದು ಓಡಿ ಬಂದ ವಧು, ತನ್ನ ಕೈಯ್ಯಲ್ಲಿದ್ದ ಹಾರವನ್ನು ರಾಹುಲ್ಗೆ ಹಾಕಿದಳು. ಇದು ಸಿನಿಮಾ ಸೀನ್ ಅಲ್ಲ. ಉತ್ತರ ಪ್ರದೇಶದ ನಗೀನಾ ಜಿಲ್ಲೆಯಲ್ಲಿ ನಡೆದ ನೈಜ ಘಟನೆ. ತಾನು ಪ್ರೀತಿಸಿದ ಹುಡುಗಿಯನ್ನು ಬಲವಂತವಾಗಿ ಬೇರೊಬ್ಬರಿಗೆ ಕೊಟ್ಟು ಮದುವೆ ಮಾಡುವುದನ್ನು ವಿರೋಧಿಸಿ ರಾಹುಲ್ ತೋರಿದ ಧೈರ್ಯವಿದು.
ಇಲ್ಲೀವರೆಗೆ, ಸಿನಿಮಾ ಸ್ಟಂಟ್ನಂತೆ ಕಂಡ ದೃಶ್ಯ ಆನಂತರ ಟ್ರಾಜಿಡಿಗೆ ತಿರುಗಿತು. ಏಕೆಂದರೆ, ಘಟನೆಯಿಂದ ರೊಚ್ಚಿಗೆದ್ದ ಹುಡುಗಿಯ ಕಡೆಯವರು ರಾಹುಲ್ನನ್ನು ಚೆನ್ನಾಗಿ ಥಳಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ಪಾರು ಮಾಡಿದರು. ಇಬ್ಬರೂ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು, ಹುಡುಗಿ ದಲಿತ ಸಮುದಾಯಕ್ಕೆ ಸೇರಿದ್ದು, ಯುವಕ ಮೇಲ್ಜಾತಿಯವನಾಗಿದ್ದರಿಂದ ಇವರ ಮದುವೆಗೆ ಹುಡುಗಿ ಕಡೆಯವರು ಒಪ್ಪಿರಲಿಲ್ಲದಿದ್ದುದೇ ಈ ಘಟನೆಗೆ ಕಾರಣ.