ಇವರು ಶ್ರೀಮಂತ ಭಿಕ್ಷುಕರು!
Team Udayavani, Nov 12, 2017, 1:00 PM IST
ಪುಣೆ: ಭಿಕ್ಷೆ ಬೇಡುತ್ತಿರುವವರು ಬಡವರಾಗಿರುವುದಿಲ್ಲ. ಅವರ ಬಳಿ ಉಟಕ್ಕೂ ತಿಂಡಿಗೂ ಹಣ ಇರುವುದಿಲ್ಲ ಎಂಬುದು ನಮ್ಮ ಭ್ರಮೆಯಷ್ಟೇ! ಯಾಕೆಂದರೆ ಪುಣೆಯಲ್ಲಿ ಇದನ್ನು ಸಮರ್ಥಿಸುವ ಒಂದು ಘಟನೆ ನಡೆದಿದೆ. ಅ.31 ಮತ್ತು ನ.3ರ ನಡುವೆ ಪುಣೆಯ ಕಾಂಧ್ವಾ ಪ್ರದೇಶ ಪೊಲೀಸರು ಭಿಕ್ಷುಕರ ಮುಕ್ತ ನಗರವನ್ನು ರೂಪಿಸುವ ನಿಟ್ಟಿನಲ್ಲಿ 27 ಭಿಕ್ಷುಕರನ್ನು ಪೊಲೀಸರು ಬಂಧಿಸಿದ್ದರು. ಈ ಎಲ್ಲ ಭಿಕ್ಷುಕರಿಗೂ ಜಾಮೀನು ನೀಡಲು 5 ಸಾವಿರ ರೂ. ಜಾಮೀನು ಮೊತ್ತ ಪಾವತಿ ಮಾಡಲು ಸೂಚಿಸಲಾಗಿತ್ತು. ಹೇಗೂ ಇಷ್ಟು ಮೊತ್ತವನ್ನು ಹೊಂದಿಸಲಾಗದು. ಅವರು ಜೈಲಿನಲ್ಲೇ ಇರುತ್ತಾರೆ ನಂಬಿಕೆ ಪೊಲೀಸರದ್ದು. ಸ್ಥಳೀಯ ಕೋರ್ಟ್ನಲ್ಲಿ ಒಟ್ಟು 1,89,000 ರೂ. ನೀಡಿ ಜಾಮೀನು ಪಡೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಭಿಕ್ಷುಕರನ್ನು ಬಂಧಿಸಿದ ನಂತರ ಕೋರ್ಟ್ಗೆ ಹಾಜರುಪಡಿಸಿ, ಏಳು ದಿನಗಳವರೆಗೆ ಪುನಶ್ಚೇತನ ಕೇಂದ್ರದಲ್ಲಿಡ ಲಾಗುತ್ತದೆ. ಈ ಅವಧಿಯಲ್ಲಿ ಪ್ರೊಬೆಶನರಿ ಅಧಿಕಾರಿಯು ವರದಿಯನ್ನು ತಯಾರಿಸಿ ಕೋರ್ಟ್ಗೆ ಸಲ್ಲಿಸುತ್ತಾರೆ. ಭಿಕ್ಷುಕರ ಸಂಬಂಧಿಕರನ್ನು ಕರೆಸಿ, ಅವರ ಮೇಲೆ ನಿಗಾ ಇಡುವಂತೆ ಕೋರ್ಟ್ ಸೂಚಿಸುವ ಅವಕಾಶವಿದೆ.
ಆದರೆ ಪ್ರೊಬೆಶನರಿ ಅಧಿಕಾರಿ ಇಲ್ಲದ್ದರಿಂದ ಈ ಪ್ರಕ್ರಿಯೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಜಾಮೀನಿಗೆ ನಗದು ಶುಲ್ಕ ವಿಧಿಸಲಾಗಿತ್ತು. ಅವರ ಬಳಿ ಅಷ್ಟೊಂದು ಹಣ ಎಲ್ಲಿಂದ ಬಂತೆಂದು ಪೊಲೀಸರು ಈಗ ತಲೆಕೆಡಿಸಿಕೊಂಡಿದ್ದಾರೆ.