ದೇವರಿಗೆ 10 ರೂ.ದಾನ, ಪ್ರಾರ್ಥನೆ ಸಲ್ಲಿಸಿದ ಬಳಿಕ ಕಾಣಿಕೆ ಡಬ್ಬಿಯಿಂದ 5 ಸಾವಿರ ಕದ್ದು ಪರಾರಿ
Team Udayavani, Jul 11, 2023, 6:29 PM IST
ಚಂಡೀಗಢ: ವ್ಯಕ್ತಿಯೊಬ್ಬ ಕಾಣಿಕೆ ಡಬ್ಬಿಯಿಂದ 5000 ರೂ.ನಗದನ್ನು ಕಳ್ಳತನ ಮಾಡಿ ಪರಾರಿ ಆಗಿರುವ ಘಟನೆ ಹರ್ಯಾಣದ ರೇವಾರಿ ಜಿಲ್ಲೆಯ ಹನುಮಾನ್ ದೇವಸ್ಥಾನದಲ್ಲಿ ನಡೆದಿದೆ.
ಧಾರುಹೆರಾ ಪಟ್ಟಣದ ದೇವಸ್ಥಾನದಲ್ಲಿಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಎಲ್ಲರೊಂದಿಗೆ ಹನುಮಾನ್ ದೇವಾಲಯದ ಗರ್ಭ ಗುಡಿಗೆ ತೆರಳಿದ್ದಾನೆ. ಅಲ್ಲಿ ಕೆಳಗೆ ಕೂತುಕೊಂಡು ಉಳಿದವರೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿ, ಪ್ರಾರ್ಥನೆ ಸಲ್ಲಿಸಿದ್ದಾನೆ. ಈ ವೇಳೆ ಅರ್ಚಕರ ಸಮ್ಮುಖದಲ್ಲಿ 10 ರೂಪಾಯಿಯನ್ನು ದೇವರ ಪಾದಗಳತ್ತ ಹಾಕಿದ್ದಾನೆ.
ಕೆಲ ಸಮಯದ ಬಳಿಕ ಗರ್ಭಗುಡಿಯ ಪಕ್ಕ ಯಾರೂ ಇಲ್ಲದಿದ್ದಾಗ ಕಳ್ಳ ನಿಧಾನವಾಗಿ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ 5 ಸಾವಿರ ರೂ.ವನ್ನು ಕದ್ದು ಪರಾರಿಯಾಗಿದ್ದಾನೆ.
ಅರ್ಚಕರು ಕಳ್ಳತನವಾಗಿರುವ ಕುರಿತು ಗಮನ ಹರಿಸದೆ, ದೇವಸ್ಥಾನದ ಡೋರ್ ಬಂದ್ ಮಾಡಿ ತೆರಳಿದ್ದಾರೆ. ಮರುದಿನ ಬೆಳಗ್ಗೆ ಬಂದು ನೋಡಿದಾಗ ಕಾಣಿಕೆ ಡಬ್ಬಿ ಒಡೆದಿರುವುದನ್ನ ನೋಡಿದ್ದಾರೆ.
ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಈ ಆಧಾರವನ್ನಿಟ್ಟುಕೊಂಡು ತನಿಖೆ ಶುರು ಮಾಡಿದ್ದಾರೆ.