ಮಮತಾ ಬ್ಯಾನರ್ಜಿ ಟಿಎಂಸಿಯಲ್ಲಿ ಭಿನ್ನರಾಗ?
Team Udayavani, Feb 13, 2022, 6:40 AM IST
ಕೋಲ್ಕತಾ: ಪ. ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಮಧ್ಯೆಯೇ, ಪಕ್ಷದಲ್ಲಿ 20 ಮಂದಿಯ ಹೊಸ ಸಮಿತಿ ರಚಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ, ಮಮತಾ ಬ್ಯಾನರ್ಜಿ ಅವರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ, “ಒಬ್ಬರಿಗೆ ಒಂದು ಹುದ್ದೆ’ಯ ಕುರಿತಂತೆ ಹೇಳಿಕೆ ನೀಡಿದ್ದರು. ಇದು ಟಿಎಂಸಿಯ ಹಳೇ ತಲೆಮಾರಿನ ನಾಯಕರಿಗೆ ಸಿಟ್ಟು ತರಿಸಿತ್ತು. ಅಲ್ಲದೆ ಹಳೇ ತಲೆಮಾರಿನವರು ಮತ್ತು ಹೊಸ ತಲೆಮಾರಿನ ನಾಯಕರ ನಡುವೆ ಯಾವುದೇ ಬಿಕ್ಕಟ್ಟು ಉಂಟಾಗದಿರಲಿ ಎಂಬ ಕಾರಣದಿಂದಾಗಿ ಮಮತಾ ಬ್ಯಾನರ್ಜಿ ಅವರು, ಪಕ್ಷದ ಸಂಘಟನ ಸಮಿತಿಯನ್ನು ವಿಸರ್ಜನೆ ಮಾಡಿ 20 ಮಂದಿಯ ಹೊಸ ಸಮಿತಿ ರಚಿಸಿದ್ದಾರೆ.
ಇದಕ್ಕೆ ಮಮತಾ ಅವರೇ ಅಧ್ಯಕ್ಷೆ. ಅಭಿಷೇಕ್ ಸದ್ಯಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅಲ್ಲ. ಆದರೆ ಹೊಸ ಸಮಿತಿಯಲ್ಲಿ ಅಮಿತ್ ಮಿತ್ರಾ, ಪಾರ್ಥ ಚಟರ್ಜಿ, ಸುಬ್ರತಾ ಬಕ್ಷಿ, ಸುದೀಪ್ ಬಂಡೋಪಾಧ್ಯಾಯ, ಅಭಿಷೇಕ್ ಬ್ಯಾನರ್ಜಿ, ಅನುಬ್ರತಾ ಮಂಡಲ್, ಅರೋಪ್ ಬಿಸ್ವಾಸ್, ಫಿರಾದ್ ಹಕೀಮ್ ಮತ್ತು ಯಶವಂತ ಸಿನ್ಹಾ ಇದ್ದಾರೆ. ಆದರೆ ಡೆರೆಕ್ ಒಬ್ರಿಯಾನ್, ಸೌಗತಾ ರಾಯ್ರನ್ನು ಸಮಿತಿಯಿಂದ ಕೈಬಿಡಲಾಗಿದೆ.