ಇಂದು ಸಂಸತ್ ಸದಸ್ಯರಿಗೆ ಕರ್ನಾಟಕದ ರಾಗಿ ಭೋಜನ
ಕರ್ನಾಟಕದ ಬಾಣಸಿಗರಿಂದ ವಿಶೇಷ ರಾಗಿ ಖಾದ್ಯಗಳ ತಯಾರಿಕೆ
Team Udayavani, Dec 20, 2022, 7:20 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಉಪಕ್ರಮ “ಸಿರಿಧಾನ್ಯ ವರ್ಷ’ದ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅವರು ಮಂಗಳವಾರ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ವಿಶೇಷ “ಸಿರಿಧಾನ್ಯ ಭೋಜನ’ ಆಯೋಜಿಸಿದ್ದಾರೆ.
ಸಂಸತ್ ಆವರಣದಲ್ಲಿ ಏರ್ಪಡಿಸಿರುವ ಈ ವಿಶೇಷ ಭೋಜನ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಭಾಗವಹಿಸಲಿದ್ದಾರೆ. ವಿಶೇಷವಾಗಿ ಕರ್ನಾಟಕದ ಬಾಣಸಿಗರು ರಾಗಿ ಇಡ್ಲಿ, ರಾಗಿ ದೋಸೆ ಸೇರಿದಂತೆ ರಾಗಿಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಲಿದ್ದಾರೆ. ಇದಕ್ಕೆಂದು ಈಗಾಗಲೇ ಬಾಣಸಿಗರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ.
ಇದರೊಂದಿಗೆ ಜೋಳದ ರೊಟ್ಟಿ, ರಾಗಿ ರೊಟ್ಟಿ, ಸಜ್ಜೆ ಕಿಚಡಿ, ಜೋಳದ ಕಿಚಡಿ, ಸಜ್ಜೆ ಪಾಯಸ ಸೇರಿದಂತೆ ಸಿರಿಧಾನ್ಯಗಳ ವಿಶೇಷ ಖಾದ್ಯಗಳನ್ನು ಸಂಸತ್ ಸದಸ್ಯರಿಗೆ ಬಡಿಸಲಾಗುತ್ತದೆ. ಸಿರಿಧಾನ್ಯ ಸೇವನೆಯ ಸಂಸ್ಕೃತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಉಪಕ್ರಮದ ಆಧಾರದಲ್ಲಿ, ವಿಶ್ವಸಂಸ್ಥೆ 2023ನೇ ಇಸವಿಯನ್ನು “ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸಿದೆ.