ಬಿಜೆಪಿಗೆ ಹಾಕುವ ಮತದಿಂದ 25 ವರ್ಷದ ಭವಿಷ್ಯ ನಿರ್ಧಾರ
Team Udayavani, Feb 23, 2022, 7:25 AM IST
ಇಂಫಾಲ್ (ಮಣಿಪುರ): “ನೀವು ಬಿಜೆಪಿಗೆ ಹಾಕುವ ಒಂದೊಂದು ಮತ, ಮಣಿಪುರದ ಮುಂದಿನ 25 ವರ್ಷಗಳನ್ನು ನಿರ್ಧರಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ, ಮಣಿ ಪುರದ ಜನತೆನ್ನುದ್ದೇಶಿಸಿ ಹೇಳಿದ್ದಾರೆ.
ಪೂರ್ವ ಇಂಫಾಲ್ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾ ಡಿದ ಅವರು, “ಕಳೆದ ಐದು ವರ್ಷಗಳಲ್ಲಿ ಮಣಿಪುರದಲ್ಲಿ ಸ್ಥಿರತೆ ಹಾಗೂ ಶಾಂತಿ ಮೂಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಮುಂದಿನ 25 ವರ್ಷಗಳ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದಂತಾಗುತ್ತದೆ. ಹಾಗಾಗಿ ಬಿಜೆಪಿಗೆ ಮತ ನೀಡಿ’ ಎಂದು ಮನವಿ ಮಾಡಿದ್ದಾರೆ.
ಬಿಜೆಪಿಯ ಪ್ರಯತ್ನದಿಂದ ರಾಜ್ಯದ ಅನೇಕ ಯುವಕರು ಹಿಂಸೆಯನ್ನು ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ. ಹಾಗಾಗಿ ಮಣಿಪುರದ ಅಭಿವೃದ್ಧಿಗೆ “ಡಬಲ್ ಎಂಜಿನ್’ ಸರಕಾರ ಬೇಕು’ ಎಂದು ಮೋದಿ ಹೇಳಿದರು.
ಈಗ ಕಂಗೊಳಿಸುತ್ತಿವೆ ಪುಣ್ಯ ಕ್ಷೇತ್ರಗಳು’: “ಪ್ರತೀ ವರ್ಷ ಉತ್ತರ ಪ್ರದೇಶದಲ್ಲಿ ದೀಪಾವಳಿ ಆಚರಿಸಲಾಗುತ್ತಿತ್ತು. ಆದರೆ ಅಯೋಧ್ಯೆಯಲ್ಲಿ ಎಂದಾದರೂ ದೀಪೋತ್ಸವ ನಡೆದಿತ್ತೇ? ದೀಪಾವಳಿಯಂದು ವಾರಾಣಸಿ ಅಲಂಕೃತಗೊಂಡಿತ್ತೇ? ಕೃಷ್ಣ ಜನ್ಮಾಷ್ಟಮಿಯೂ ಬರುತ್ತಿದ್ದು ಆದರೆ ಮಥುರಾ ಎಂದಾದರೂ ಸಿಂಗಾರಗೊಂಡಿತ್ತೇ? ಈಗ ಇದೆಲ್ಲವೂ ಬಿಜೆಪಿ ಆಡಳಿತದಲ್ಲಿ ನಡೆಯುತ್ತಿದೆ’ ಎಂದು ಮೋದಿ ಹೇಳಿದರು.
ಇಂದು 4ನೇ ಹಂತದ ಮತದಾನ
ಉತ್ತರ ಪ್ರದೇಶದಲ್ಲಿ ಬುಧವಾರ ನಾಲ್ಕನೇ ಹಂತದ ಮತದಾನ ನಡೆಯಲಿದೆ. 9 ಜಿಲ್ಲೆಗಳ 51 ಕ್ಷೇತ್ರಗಳಲ್ಲಿನ ಜನತೆ ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ಇವುಗಳಲ್ಲಿ ಲಖೀಂಪುರ್ ಖೇರಿ ಕ್ಷೇತ್ರ ಅತೀ ಮಹತ್ವದ್ದು. ಕಳೆದ ವರ್ಷ, ಬಿಜೆಪಿ ನಾಯಕ ಅಜಯ್ ಕುಮಾರ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ, ಮುಷ್ಕರ ನಿರತ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರು ಸೇರಿ 8 ಮಂದಿಯ ಸಾವಿಗೆ ಕಾರಣರಾದರೆಂಬ ಆರೋಪವಿದೆ. ಹಾಗಾಗಿ ಈ ಕ್ಷೇತ್ರ ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಹೀಗಾಗಿ ಈ ಕ್ಷೇತ್ರ ಅತೀ ಪ್ರಾಮುಖ್ಯ ಪಡೆದಿದೆ.