Rajasthan Election: ರಾಜಸ್ತಾನ ಬಿಜೆಪಿ ಚುನಾವಣಾ ಸಮಿತಿಯಲ್ಲಿ ವಸುಂಧರಾ ರಾಜೇಗಿಲ್ಲ ಸ್ಥಾನ
Team Udayavani, Aug 18, 2023, 12:47 PM IST
ಜೈಪುರ: ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನಕ್ಕೆ ಬಿಜೆಪಿಯು ಗುರುವಾರ ಎರಡು ಪ್ರಮುಖ ಚುನಾವಣಾ ಸಮಿತಿಗಳನ್ನು ಘೋಷಿಸಿದ್ದು, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ಕಡೆಗಣಿಸಲಾಗಿದೆ.
ಜೈಪುರದಲ್ಲಿ ಪಕ್ಷವು ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದ್ದು, ಬಳಿಕ ಕೋರ್ ಕಮಿಟಿ ಸಭೆಯನ್ನು ನಡೆಸಿದೆ. ಆದರೆ ಮಾಜಿ ಮುಖ್ಯಮಂತ್ರಿ ರಾಜೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ.
ಅವರನ್ನು ಹೊರತುಪಡಿಸಿ, ಮಾಜಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ಉಪನಾಯಕ ಸತೀಶ್ ಪೂನಿಯಾ, ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಎರಡು ಸಮಿತಿಗಳ ಭಾಗವಾಗಿಲ್ಲ.
21 ಸದಸ್ಯರ ಚುನಾವಣಾ ನಿರ್ವಹಣಾ ಸಮಿತಿಯನ್ನು ಮಾಜಿ ಸಂಸದ ನಾರಾಯಣ ಪಂಚಾರಿಯಾ ನೇತೃತ್ವ ವಹಿಸಿದ್ದಾರೆ. ಪ್ರದೇಶ ಸಂಕಲ್ಪ ಪತ್ರ (ಪ್ರಣಾಳಿಕೆ) ಸಮಿತಿ ಎಂಬ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಮುನ್ನಡೆಸಲಿದ್ದಾರೆ.
ವರ್ಷಾಂತ್ಯದ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವು ಮುಂಬರುವ ವಾರಗಳಲ್ಲಿ ಮೂರನೇ ಚುನಾವಣಾ ಪ್ರಚಾರ ಸಮಿತಿಯನ್ನು ಘೋಷಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ:Raj Deepak Shetty: ಕಣ್ಣಲ್ಲೇ ಮಿಂಚು ಹರಿಸುವ ಟೋಬಿಯ ಖಡಕ್ ವಿಲನ್ ರಾಜ್ ದೀಪಕ್ ಶೆಟ್ಟಿ
ಚುನಾವಣಾ ಸಮಿತಿಗಳಲ್ಲಿ ರಾಜೇ ಅವರನ್ನು ಸೇರಿಸಿಕೊಳ್ಳದಿರುವ ಬಗ್ಗೆ ಕೇಳಿದಾಗ, ‘ಅವರು ಚುನಾವಣೆಯಲ್ಲಿ ಪ್ರಚಾರ ಮಾಡುತ್ತಾರೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷೆ. ಅವರ ಪಾತ್ರ ದೊಡ್ಡದು. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದಾರೆ. ಚುನಾವಣೆಯಲ್ಲಿ ಪ್ರಚಾರ ಮಾಡುತ್ತಾರೆ. ನಾವೆಲ್ಲರೂ ಅವರನ್ನು ಗೌರವಿಸುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಚುನಾವಣಾ ನಿರ್ವಹಣಾ ಸಮಿತಿಯು ದೈನಂದಿನ ಮತದಾನ ಸಂಬಂಧಿತ ಚಟುವಟಿಕೆಗಳನ್ನು ನಿರ್ವಹಿಸಲು ಅನುಭವಿ ನಾಯಕರನ್ನು ಹೊಂದಿದೆ ಎಂದು ಅವರು ಹೇಳಿದರು