ಪೊಲೀಸರು ತಮ್ಮವರನ್ನು ಉಳಿಸಲು ನನ್ನ ಪತಿಯನ್ನು ಕೊಂದರು: ವಿಕಾಸ್ ದುಬೆ ಪತ್ನಿ
Team Udayavani, Jul 24, 2020, 9:01 AM IST
ಲಕ್ನೋ: ಇತ್ತೀಚೆಗೆ ಪೊಲೀಸರ ಗುಂಡಿಗೆ ಬಲಿಯಾದ ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯ ಪತ್ನಿ ರಿಚಾ ದುಬೆ, ತನ್ನ ಪತಿಯ ಯಾವುದೇ ಅಪರಾಧಗಳ ಬಗ್ಗೆ ಸುಳಿವು ಕೂಡಾ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ರಿಚಾ, ವಿಕಾಸ್ ಮತ್ತು ನಾನು 1998ರಿಂದ ಪ್ರತ್ಯೇಕವಾಗಿದ್ದೇವೆ. ನಂತರ ನಮ್ಮ ಮಾತುಕತೆ ಅಷ್ಟಕಷ್ಟೆ. ಇಬ್ಬರು ಮಕ್ಕಳನ್ನು ಬೆಳೆಸುವ ವಿಚಾರವಾಗಿ ಮಾತ್ರ ನಮ್ಮ ನಡುವೆ ಮಾತುಕತೆ ಇತ್ತು ಎಂದು ಹೇಳಿದ್ದಾರೆ.
ನನ್ನ ಪತಿ ಕೋಪಿಷ್ಠ ಮತ್ತು ಉದ್ವೇಗಗೊಳ್ಳುವ ಸ್ವಭಾವದವನು. ಆದರೆ ಪೊಲೀರನ್ನು ಕೊಲ್ಲುವಷ್ಟು ಕ್ರೂರಿ ಎಂದು ನನಗೆ ಗೊತ್ತಿರಲಿಲ್ಲ ಎಂದು ಪತ್ನಿ ರಿಚಾ ಹೇಳಿದ್ದಾರೆ. ವಿಕಾಸ್ ಮರಣದ ನಂತರ ವಿಧವೆಯಾದ ಬಳಿಕ ಈಗ ಕಾನ್ಪುರ ದಾಳಿಯಲ್ಲಿ ಸತ್ತ ಪೊಲೀಸರ ಮಡದಿಯರ ನೋವು ಅರ್ಥವಾಗುತ್ತಿದೆ ಎಂದು ರಿಚಾ ಹೇಳಿಕೊಂಡಿದ್ದಾರೆ.
ನಾನೆಂದು ವಿಕಾಸ್ ದುಬೆಯ ಅಪರಾಧ ಜಗತ್ತಿನತ್ತ ಇಣುಕಿ ನೋಡಿದವಳಲ್ಲ. ಆ ಅಪರಾಧ ಲೋಕದಿಂದ ನನ್ನ ಇಬ್ಬರು ಮಕ್ಕಳನ್ನು ದೂರ ಇಡುವುದು ಒಂದೇ ನನ್ನ ಗುರಿಯಾಗಿತ್ತು ಎಂದಿದ್ದಾರೆ.
ಜುಲೈ 2ರ ರಾತ್ರಿ ವಿಕಾಸ್ ದುಬೆಯನ್ನು ಬಂಧಿಸಲು ಬಂದ ಪೊಲೀಸರ ಮೇಲೆ ದುಬೆ ಸಹಚರರು ಗುಂಡು ಹಾರಿಸಿದ್ದರು. ಅದರಲ್ಲಿ ಎಂಟು ಪೊಲೀಸರು ಸಾವನ್ನಪ್ಪಿದ್ದರು. ನಂತರ ಮಧ್ಯಪ್ರದೇಶದಲ್ಲಿ ಸೆರೆಸಿಕ್ಕ ದುಬೆಯನ್ನು ಉತ್ತರ ಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ಪೊಲೀಸರನ್ನು ಮತ್ತು ಕೆಲ ರಾಜಕಾರಣಿಗಳನ್ನು ಉಳಿಸಲು ವಿಕಾಸ್ ನನ್ನು ಕೊಲ್ಲಲಾಗಿದೆ ಎಂದು ಕೆಲವರು ಹೇಳುತ್ತಾರೆ ಎಂದು ಪತ್ನಿ ರಿಚಾ ಹೇಳಿದರು.