ಮಂದಿರ ನಿರ್ಮಾಣದ ಬಯಕೆ ನಮಗೂ ಇದೆ: ಶಾ
Team Udayavani, Nov 27, 2018, 6:00 AM IST
ಇಂದೋರ್: ಅಯೋಧ್ಯೆಯಲ್ಲಿ ರಾಮಮಂದಿರವನ್ನು ಆದಷ್ಟು ಬೇಗ ನಿರ್ಮಿಸಬೇಕೆಂದು ಎಲ್ಲರಂತೆ ಬಿಜೆಪಿಯೂ ಬಯಸುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಅಲ್ಲದೆ, ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಸುಗ್ರೀವಾಜ್ಞೆಯ ಬಗೆಗಿನ ಪ್ರಶ್ನೆಗೆ, ಕೋರ್ಟ್ ಜನವರಿಗೆ ವಿಚಾರಣೆ ನಿಗದಿಪಡಿಸಿದೆ. ಮುಂದೇನಾಗುತ್ತೆ ನೋಡೋಣ ಎಂದಷ್ಟೇ ಹೇಳಿದ್ದಾರೆ. ಈ ನಡುವೆ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಅಯೋಧ್ಯೆ ಭೇಟಿಯನ್ನು ಕೇಂದ್ರ ಸಚಿವೆ ಉಮಾಭಾರತಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಬಿಜೆಪಿ ಯೇನೂ ರಾಮಮಂದಿರದ ಪೇಟೆಂಟ್ ಪಡೆದಿಲ್ಲ ಎಂದಿದ್ದಾರೆ. “ಅಯೋಧ್ಯೆಗೆ ಆಗಮಿಸಿದ ಉದ್ಧವ್ ಠಾಕ್ರೆ ಅವರ ಪ್ರಯತ್ನವನ್ನು ಶ್ಲಾಘಿಸುತ್ತೇನೆ. ಎಸ್ಪಿ, ಬಿಎಸ್ಪಿ, ಒವೈಸಿ, ಆಜಂ… ಖಾನ್ ಮುಂತಾದ ಎಲ್ಲರನ್ನೂ ನಾನು ಮಂದಿರ ನಿರ್ಮಾಣ ವಿಚಾರವಾಗಿ ಕೈಜೋಡಿಸುವಂತೆ ಕೇಳಿ ಕೊಳ್ಳುತ್ತೇನೆ ಎಂದೂ ಸಚಿವೆ ಹೇಳಿದ್ದಾರೆ. ಇದೇ ವೇಳೆ, ಸುಪ್ರೀಂ ತೀರ್ಪನ್ನೂ ಮೀರಿ ಮಂದಿರ ನಿರ್ಮಿಸುವ ಧೈರ್ಯ ಬಿಜೆಪಿ ಗಿದೆಯೇ ಎಂದು ಆರ್ಜೆಡಿ ನಾಯಕ ಲಾಲು ಪ್ರಸಾದ್ರ ಪತ್ನಿ ರಾಬ್ರಿ ದೇವಿ ಪ್ರಶ್ನಿಸಿದ್ದಾರೆ.