ಅನಿತಾ ಪಿ. ಪೂಜಾರಿ ತಾಕೊಡೆಗೆ ಅಲ್ಲಮ ಸಾಹಿತ್ಯ ಪ್ರಶಸ್ತಿ
Team Udayavani, Oct 8, 2018, 4:52 PM IST
ಮುಂಬಯಿ: ಜನಸ್ಪಂದನ ಟ್ರಸ್ಟ್ ಶಿಕಾರಿಪುರ ಆಯೋಜಿಸಿರುವ ಅಲ್ಲಮ ಸಾಹಿತ್ಯ ಪ್ರಶಸ್ತಿಗೆ ಕವಿ, ಲೇಖಕಿ ಅನಿತಾ ಪೂಜಾರಿ ತಾಕೊಡೆಯವರ ಕವನ ಸಂಕಲನ ಅಂತರಂಗದ ಮೃದಂಗ ಹಾಗೂ ಜಯಶ್ರೀ ಕಾಸರವಳ್ಳಿಯವರ ಕಥಾ ಸಂಕಲನ ದಿನಚರಿಯ ಕಡೆ ಪುಟಗಳು ಆಯ್ಕೆಯಾಗಿದೆ ಎಂದು, ಜನಸ್ಪಂದನ ಟ್ರಸ್ಟ್ನ ಅಧ್ಯಕ್ಷ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಶಿಕಾರಿಪುರ ಸಾಹಿತ್ಯೋತ್ಸವ- 2018 ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಅಕ್ಟೋಬರ್ 14 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮೂಲತ: ಮೂಡಬಿದ್ರೆಯ ತಾಕೊಡೆಯವರಾದ ಅನಿತಾ ಪೂಜಾರಿಯವರು, ಒಳನಾಡಿನ ಮತ್ತು ಹೊರನಾಡಿನ ಪ್ರಮುಖ ಎಲ್ಲಾ ಪತ್ರಿಕೆಗಳಲ್ಲಿ ಕತೆ, ಕವನ ಲೇಖನ ಪ್ರವಾಸ ಕಥನಗಳನ್ನು ನಿರಂತರವಾಗಿ ಬರೆಯುತ್ತಾ ಬಂದಿದ್ದಾರೆ.
ಇವರ ಚೊಚ್ಚಲ ಕವನ ಸಂಕಲನ ಕಾಯುತ್ತಾ ಕವಿತೆ ಪ್ರಕಟವಾಗಿದೆ. ಅಂತರಂಗದ ಮೃದಂಗ ಕವನ ಸಂಕಲನದ ಹಸ್ತಪ್ರತಿಗೆ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ 2016 ನೇ ಸಾಲಿನ ಶ್ರೀಮತಿ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ ಲಭಿಸಿದೆ. ಅಭಿಜಿತ್ ಪ್ರಕಾಶನದ ಮೂಲಕ ಬೆಳಕು ಕಂಡ ಈ ಕೃತಿಗೆ ಒಳನಾಡು ಮತ್ತು ಹೊರನಾಡಿನ ಕೆಲವು ಸಾಹಿತಿಗಳು ಮೆಚ್ಚಿ ಪತ್ರಿಕೆಗಳಿಗೆ ವಿಮರ್ಶೆಯನ್ನು ಬರೆದಿದ್ದಾರೆ. ಇವರ ಕತೆ ಕವನಗಳಿಗೆ ಹಲವಾರು ಬಹುಮಾನಗಳು ಬಂದಿದ್ದು ಮುಂಬಯಿ ಹಾಗೂ ಮಂಗಳೂರು ಆಕಾಶ ವಾಣಿ ಯಲ್ಲಿಯೂ ಪ್ರಸಾರ ಗೊಂಡಿವೆ. ಇವರು ಬರೆದ ಭಾವಗೀತೆ ಮಂಗಳೂರು ಆಕಾಶವಾಣಿಯ ತಿಂಗಳ ಭಾವಗಾನಕ್ಕೆ ಆಯ್ಕೆ ಯಾಗಿದೆ. ಟೈಮ್ಸ್ ಆಪ್ ಬೆದ್ರ ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿರುವ ಅನಿತಾ ಅವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.