ಬಂಟರ ಸಂಘ ಶ್ರೀ ಮಹಾವಿಷ್ಣು ಮಂದಿರದಲ್ಲಿ ವಾರ್ಷಿಕ ಗಣೇಶೋತ್ಸವ
Team Udayavani, Sep 20, 2018, 5:20 PM IST
ಮುಂಬಯಿ: ಎಲ್ಲಿ ಧಾರ್ಮಿಕ ಪ್ರಜ್ಞೆಯ ಅರಿವು ಮೂಡುತ್ತದೆಯೋ ಅಲ್ಲಿ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಧರ್ಮ ಮತ್ತು ಸಂಸ್ಕೃತಿ ಮಾನವ ಬದುಕಿನ ಎರಡು ಅವಿಭಾಜ್ಯ ಅಂಗಗಳಾಗಿವೆ. ಧಾರ್ಮಿಕ ಜಾಗೃತಿ, ಸತ್ಚಿಂತನೆ ಬೆಳೆಸುವುದರ ಮೂಲಕ ಸಂಸ್ಕಾರಯುತ ಉತ್ತಮ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಅಭಿಪ್ರಾಯಿಸಿದರು.
ಸೆ. 17 ರಂದು ಸಂಜೆ ಬಂಟರ ಸಂಘದ ಆವರಣದಲ್ಲಿ ಶ್ರೀ ಮಹಾವಿಷ್ಣು ಮಂದಿರದಲ್ಲಿ ಜರಗಿದ 5ನೇ ಹಾಗೂ ಕೊನೆಯ ದಿನದ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಆಯೋ ಜಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣೇಶ ಆರಾಧನೆ ಎಂಬುವುದು ಏಕತೆ ಮತ್ತು ಸೋದರತ್ವದ ಸಂಕೇತವಾಗಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವರಾಜ್ಯದ ಕಲ್ಪನೆಗೆ ಮುಂದಾದ ಸಮ ಯದಲ್ಲಿ ಜನರಲ್ಲಿ ಆಧ್ಯಾತ್ಮಿಕ ಚಿಂತನೆಯ ಬೀಜ ಬಿತ್ತಿ, ಭಾವೈಕ್ಯದಿಂದ ನಾವು ಸ್ವತಂತ್ರರಾಗಲು ಸಾಧ್ಯ ಎಂಬುವುದನ್ನು ತೋರಿಸಿಕೊಟ್ಟರು. ಮರಾಠಿ ಮಣ್ಣಿನಲ್ಲಿ ಈ ಪರಂಪರೆ ಸಾರ್ವಜನಿಕ ನೆಲೆಯಲ್ಲಿ ಇಂದಿಗೂ ಮುಂದುವರಿಯುತ್ತಿರುವು ದನ್ನು ನಾವು ಕಾಣಬಹುದು. ಬಂಟರ ಸಂಘ ದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ಮಂದಿರದಲ್ಲಿ ಸುಮಾರು 13 ವರ್ಷಗಳಿಂದ ನಡೆಯುತ್ತಾ ಬಂದಿರುವ ಗಣೇಶೋತ್ಸವಕ್ಕೆ ಜ್ಞಾನ ಮಂದಿರ ಸಮಿತಿಯ ಎಲ್ಲಾ ಕಾರ್ಯಾಧ್ಯಕ್ಷರುಗಳು ತುಂಬು ಸಹಕಾರ ನೀಡುತ್ತಾ ಬಂದಿದ್ದಾರೆ. ಪ್ರಸ್ತುತ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರು ಅವರೆಲ್ಲರಿಗಿಂತಲೂ ಭಿನ್ನವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ಮಾಡುವ ಮೂಲಕ ಹಬ್ಬಕ್ಕೆ ಹೊಸ ರೂಪ ನೀಡಿ, ವೈವಿಧ್ಯಮಯವನ್ನಾಗಿಸಲು ಪ್ರಯ ತ್ನಿಸಿದ್ದಾರೆ. ಈ ಪರಂಪರೆ ಮುಂದುವರಿಯ ಬೇಕು. ಬಂಟ ಬಾಂಧವರು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಎಂದು ಕರೆನೀಡಿದರು. ಜಾಗತಿಕ ಬಂಟರ ಸಂಘ ಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಾದ ಎರಡೂ ಸಮ್ಮಿಲನಗಳಿಗೆ ಸಂಘವು ತುಂಬು ಹೃದಯದ ಪ್ರೋತ್ಸಾಹ, ಸಹಕಾರ ನೀಡಿದೆ. ಕಳೆದ ಸಮ್ಮಿಲನವಂತೂ ಅಭೂತಪೂರ್ವ ಯಶಸ್ಸನ್ನು ಕಂದಿದೆ ಎಂದು ನುಡಿದು ಐಕಳರನ್ನು ಅಭಿನಂದಿಸಿದರು.
ಆರಂಭದಲ್ಲಿ ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥ ನೆಗೈದರು. ಅಧ್ಯಕ್ಷರು ಹಾಗೂ ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಂದಿರದ ಎಲ್ಲಾ ಕಾರ್ಯಕ್ರಮಳಿಗೆ ಮುಕ್ತ ಮನಸ್ಸಿನಿಂದ ಸಹಕಾರ ನೀಡುತ್ತಿರುವ ಪದಾಧಿಕಾರಿಗಳು, ವಿಶ್ವಸ್ಥರು, ಮಾಜಿ ಅಧ್ಯಕ್ಷರುಗಳು, ಉಪಸಮಿತಿಗಳು, ಪ್ರಾದೇಶಿಕ ಸಮಿತಿಗಳು, ಮಹಿಳಾ ವಿಭಾಗ, ಯುವ ವಿಭಾಗದವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮಾನ್ಯ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಸಲ್ಲಿಸಲಾಯಿತು. ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರು ಅಧ್ಯಕ್ಷರು, ಗಣ್ಯರುಗಳನ್ನು ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ವಿಶ್ವಸ್ಥರು, ಮಾಜಿ ಕಾರ್ಯಾಧ್ಯಕ್ಷರುಗಳನ್ನು ಗೌರವಿಸಲಾಯಿತು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಾಹಿತ್ಯ ಮತ್ತು ಸಮಾಜ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ವಂದಿಸಿದರು.
ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಪ್ರಥಮ ಜಯಂತ್ ಪಕ್ಕಳ, ದ್ವಿತೀಯ ಕರುಣಾಕರ ಶೆಟ್ಟಿ, ತೃತೀಯ ಕಲ್ಪನಾ ಕೆ. ಶೆಟ್ಟಿ, ತೆಂಗಿನಕಾಯಿ ಕಟ್ಟುವ ಸ್ಪರ್ಧೆಯಲ್ಲಿ ಪ್ರಸಾದ್ ಎಂ. ಶೆಟ್ಟಿ ಪ್ರಥಮ, ಡಾ| ಪ್ರಭಾಕರ ಶೆಟ್ಟಿ ಬೋಳ ದ್ವಿತೀಯ, ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಅನ್ವಿ ಪ್ರವೀಣ್ ಶೆಟ್ಟಿ ಪ್ರಥಮ, ಸಿದ್ದಿಕಾ ಶೆಟ್ಟಿ ದ್ವಿತೀಯ, ಪ್ರತ್ವಿಕಾ ಶೆಟ್ಟಿ ತೃತೀಯ ಬಹುಮಾನ ಪಡೆದಿದ್ದು, ಅವರನ್ನು ಗಣ್ಯರು ಬಹುಮಾನ ವಿತರಿಸಿ ಗೌರವಿಸಿದರು. ಗಣೇಶೋತ್ಸವದ ಹೊಕಟ್ಟುವ ಸ್ಪರ್ಧೆಯಲ್ಲಿ ಪ್ರಶಾಂತಿ ಡಿ. ಶೆಟ್ಟಿ ಪ್ರಥಮ, ಸುಜಯಾ ಆರ್. ಶೆಟ್ಟಿ ದ್ವಿತೀಯ, ಭವಾನಿ ಶೆಟ್ಟಿ ತೃತೀಯ ಬಹುಮಾನ ಪಡೆದಿದ್ದು, ಅವರನ್ನು ಬಹುಮಾನವನ್ನಿತ್ತು ಅಭಿನಂದಿಸಲಾಯಿತು.
ಗಣೇಶೋತ್ಸವದ ಅಲಂಕಾರ ಸೇವೆಯಲ್ಲಿ ಸಹಕರಿಸಿದ ಹರೀಶ್ ವಾಸು ಶೆಟ್ಟಿ, ಹಣ್ಣುಹಂಪಲು ಸೇವೆ ನೀಡಿದ ಕೆ. ಎಂ. ಶೆಟ್ಟಿ, ಶೋಭಾಯಾತ್ರೆಯ ಸೇವೆಗೈದ ಪಾಂಡುರಂಗ ಶೆಟ್ಟಿ, ಹರಿಕಥೆ ಸೇವಾದಾರರಾದ ಮಾತೃಭೂಮಿ ಕೋ. ಆಪರೇಟಿವ್ ಸೊಸೈಟಿ ಹಾಗೂ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಡಾ| ಆರ್. ಕೆ. ಶೆಟ್ಟಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ವಿ. ಶೆಟ್ಟಿ, ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಎನ್. ಶೆಟ್ಟಿ, ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ, ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಆರ್. ಶೆಟ್ಟಿ ತೆಳ್ಳಾರ್, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ, ಉದ್ಯಮಿಗಳಾದ ಚಂದ್ರಹಾಸ ಎಂ. ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಜ್ಞಾನ ಮಂದಿರದ ಮಾಜಿ ಕಾರ್ಯಾಧ್ಯಕ್ಷ ಜಗನ್ನಾಥ ರೈ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ, ಹರೀಶ್ ಶೆಟ್ಟಿ ರಮಾಡಾ, ಶಂಕರ್ ಬಿ. ಶೆಟ್ಟಿ ವಿರಾರ್, ಶ್ರೀರಾಮ ಭಜನ ಮಂಡಳಿ, ವಜ್ರಮಾತಾ ಮಹಿಳಾ ಮಂಡಳಿ ಮಹಾರಾಷ್ಟ್ರ ಘಟಕ, ಬೆಳ್ಳಂಪಳ್ಳಿ ಬಾಲಕಷ್ಣ ಹೆಗ್ಡೆ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ಶೆಟ್ಟಿ ಉಪಸ್ಥಿತರಿದ್ದರು. ಶೋಭಾಯಾತ್ರೆಯಲ್ಲಿ ನವೀನ್ ಶೆಟ್ಟಿ ಇನ್ನಬಾಳಿಕೆ ಅವರ ನೇತೃತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಂದಿರ ಘಾಟ್ಕೋಪರ್ ಪೂರ್ವ ಇಲ್ಲಿನ ಸುಮಾರು 40 ಮಂದಿ ಪುಣೇರಿ ಡೋಲು ನೃತ್ಯದೊಂದಿಗೆ ವಿಸರ್ಜನ ಮೆರವಣಿಗೆ ನಡೆಯಿತು.
ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರ ನೇತೃತ್ವದಲ್ಲಿ ಮಂದಿರದ ಪ್ರಗತಿಗಾಗಿ ವಿಶೇಷ ಕಾಳಜಿಯಿಂದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಬಂಟರ ಸಂಘದ ಅತೀ ಗೌರವಯುತ ಅಧ್ಯಕ್ಷ ಪದವಿಯ ಸ್ಥಾನಮಾನ ಪಡೆದ ಮನ್ಮೋಹನ್ ಶೆಟ್ಟಿ ಅವರು ಇತಿಹಾಸ ಸೃಷ್ಟಿಸಿದ ಅಧ್ಯಕ್ಷರಾಗಿದ್ದಾರೆ. ಬಿ. ವಿವೇಕ್ ಶೆಟ್ಟಿ ಅವರು ಸುಮಾರು 5 ವರ್ಷ ಕಾಲ ಅಧ್ಯಕ್ಷರಾಗಿ ಸಂಘ ಮತ್ತು ಸಮಾಜಕ್ಕೆ ಅದ್ಭುತ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಜರಗಿದ ವಿಶ್ವ ಬಂಟರ ಸಮ್ಮಿಲನದ ಬಗ್ಗೆ ಉಲ್ಲೇಖೀಸಿದ ಅವರು ಇಂತಹ ಸಮ್ಮಿಲನ ನಡೆಯುವುದೇ ಅಪರೂಪ. ಭಾಗವಹಿಸಿದ ಎಲ್ಲರೂ ಭಾಗ್ಯಶಾಲಿಗಳಾಗಿದ್ದಾರೆ. ಸಮ್ಮಿಲನದ ಯಶಸ್ಸಿಗೆ ದುಡಿದ ಎಲ್ಲರಿಗೂ ಕೃತಜ್ಞತೆಗಳು.
– ಐಕಳ ಹರೀಶ್ ಶೆಟ್ಟಿ , ಅಧ್ಯಕ್ಷರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ
ಗಣೇಶೋತ್ಸವವನ್ನು ಮಹಾರಾಷ್ಟ್ರದಲ್ಲಿ ಆರಂಭಿಸಿದವರು ಛತ್ರಪತಿ ಶಿವಾಜಿ ಮಹಾರಾಜ. ಆತನ ಕುಲದೇವರು ಗಣೇಶನಾದ್ದರಿಂದ ಈ ಉತ್ಸವ ವೈಭವದಿಂದ ಜರಗಲು ಕಾರಣವಾಯಿತು. ತಿಲಕರು ಸ್ವರಾಜ್ಯ ಪಡೆಯುವ ಉದ್ದೇಶದಿಂದ ಇದನ್ನು ಆಯುಧವಾಗಿ ಬಳಸಿಕೊಂಡರು. ಸಂಘದ ಅಭೂತಪೂರ್ವ ಯಶಸ್ಸಿಗೆ ಮುಖ್ಯವಾದ ಮೂರು ಕಾರಣಗಳಿವೆ. ಮಂದಿರ ನಿರ್ಮಾಣ, ನಿತ್ಯಾನಂದ ಸ್ವಾಮೀಜಿ ಅವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹದಿಮೂರು ವರ್ಷಗಳಿಂದ ಆಚರಣೆಯಲ್ಲಿರುವ ಗಣೇಶೋತ್ಸವವು ಸಂಘಕ್ಕೆ ವಿಶ್ವಮಟ್ಟದ ಸ್ಥಾನಮಾನ ದೊರಕಿಸಿಕೊಟ್ಟಿದೆ. ಐಕಳ ಹರೀಶ್ ಶೆಟ್ಟಿ ಅವರು ವಿಶ್ವಮಟ್ಟಕ್ಕೇರಲು ಇದೇ ಕಾರಣವಾಗಿದೆ. ಸಮ್ಮಿಲನದ ಯಶಸ್ಸಿಗೆ ಐಕಳರನ್ನು ಅಭಿನಂದಿಸಬೇಕು.
–ಬಿ. ವಿವೇಕ್ ಶೆಟ್ಟಿ , ವಿಶ್ವಸ್ತರು : ಬಂಟರ ಸಂಘ ಮುಂಬಯಿ