ಗ್ರಾಮೀಣ ಆಸ್ಪತ್ರೆ ಬಲಪಡಿಸುವತ್ತ ಗಮನ ಹರಿಸಿ: ಅಜಿತ್
Team Udayavani, Sep 21, 2020, 7:51 PM IST
ಪುಣೆ, ಸೆ. 20: ಪುಣೆ ನಗರದ ಆಸ್ಪತ್ರೆಗಳ ಮೇಲೆ ಹೊರೆಯಾಗುವ ಬದಲು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಡಳಿತ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳನ್ನು ಬಲಪಡಿಸುವತ್ತ ಗಮನ ಹರಿಸಬೇಕು ಎಂದು ಪುಣೆಯ ಜಿಲ್ಲಾ ಉಸ್ತುವಾರಿ ಸಚಿವ ಅಜಿತ್ ಪವಾರ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಕೋವಿಡ್ ಪರಿಸ್ಥಿತಿ ಪರಿಶೀಲಿಸಲು ಪವಾರ್ ನಗರದಲ್ಲಿ ಚುನಾಯಿತ ಸದಸ್ಯರೊಂದಿಗೆ ಸಭೆ ನಡೆಸಿದರು. ಪುಣೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದಂತೆ ಸೋಂಕಿತರ ನಿರ್ಣಾಯಕ ಚಿಕಿತ್ಸೆಗಾಗಿ ಪುಣೆಗೆ ಧಾವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಆಮ್ಲಜನಕ ಹಾಸಿಗೆಗಳ ಕೊರತೆ ಇರುವುದರಿಂದ ಅಲ್ಲಿಂದ ರೋಗಿಗಳು ಪುಣೆ ಮತ್ತು ಪಿಂಪ್ರಿ-ಚಿಂಚ್ವಾಡ್ ಆಸ್ಪತ್ರೆಗಳಿಗೆ ದಾಖಲು ಮಾಡಲು ಬಯಸುತ್ತಾರೆ. ಆದ್ದರಿಂದ ಗ್ರಾಮೀಣ ಆಸ್ಪತ್ರೆಗಳನ್ನು ಬಲಪಡಿಸಲು ರಾಜ್ಯ ಸರಕಾರ ಸಾಕಷ್ಟು ಹಣವನ್ನು ಒದಗಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾದ ಮೂಲಸೌಕರ್ಯ ಮತ್ತು ಆಮ್ಲಜನಕವನ್ನು ಒದಗಿಸಲು ಆಡಳಿತವು ಆದ್ಯತೆ ನೀಡಬೇಕು. ಇದರಿಂದ ರೋಗಿಗಳು ತಮ್ಮ ಸ್ಥಳಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆರೋಗ್ಯ ಇಲಾಖೆ ಗ್ರಾಮೀಣ ಪ್ರದೇಶಗಳಲ್ಲಿ ಗರಿಷ್ಠ ಸಂಖ್ಯೆಯ ಆಮ್ಲಜನಕ ಹಾಸಿಗೆಗಳನ್ನು ಸ್ಥಾಪಿಸುವ ಕೆಲಸವನ್ನು ವೇಗಗೊಳಿಸಬೇಕು ಎಂದು ಪವಾರ್ ಹೇಳಿದ್ದಾರೆ.
ಎನ್ಸಿಪಿಯ ಕ್ಯಾಬಿನೆಟ್ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೋಂ ಕ್ವಾರಂಟೈನ್ ಮತ್ತು ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೋಂ ಕ್ವಾರಂಟೈನ್ನಲ್ಲಿರುವ ಜತೆ ಸಂಪರ್ಕ ಸ್ಥಾಪಿಸಲುನ ಪುಣೆ ಜಿಲ್ಲಾ ಪರಿಷತ್ ಮತ್ತು ಜಿಲ್ಲಾ ಕಲೆಕ್ಟರೇಟ್ ವ್ಯವಸ್ಥೆಯನ್ನು ಮಾಡಬೇಕು. ಪ್ರತಿದಿನವೂ ಅವರ ಆರೋಗ್ಯವನ್ನು ಪರೀಕ್ಷಿಸುವುದರೊಂದಿಗೆ ಆಡಳಿತವು ಆ ಸೋಂಕಿತರಿಗೆ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದಿದ್ದಾರೆ.
ರಾಜ್ಯ ಸಚಿವ ದತ್ತಾ ಭಾರ್ನೆ ಅವರು ಮಾತನಾಡಿ, ಇದೀಗ ಗರಿಷ್ಠ ಸಂಖ್ಯೆಯ ಸೋಂಕಿತರು ಚಿಕಿತ್ಸೆಗಾಗಿ ನಗರ ಪ್ರದೇಶಗಳಿಗೆ, ಮುಖ್ಯವಾಗಿ ಪುಣೆಗೆ ಹೋಗುತ್ತಿದ್ದಾರೆ. ಈ ಕಾರಣದಿಂದ ನಗರದಲ್ಲಿ ಹಾಸಿಗೆ ಅಲಭ್ಯವಾಗಿದೆ. ಆಡಳಿತದ ಸಾಕಷ್ಟು ಪ್ರಯತ್ನಗಳನ್ನು ಮಾಡಿ ಗ್ರಾಮೀಣ ಪ್ರದೇಶದಲ್ಲಿ ಚಿಕಿತ್ಸೆಯನ್ನು ಲಭ್ಯಗೊಳಿಸಿದರೆ, ಇದು ನಗರದ ಆಸ್ಪತ್ರೆಗಳ ಮೇಲಿನ ಹೊರೆ ಸರಾಗವಾಗಿಸಲು ಸಹಾಯ ಮಾಡುತ್ತದೆ. ಗ್ರಾಮೀಣ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ವೆಂಟಿಲೇಟರ್ಗಳನ್ನು ಸಿದ್ಧವಾಗಿಡಬೇಕು ಎಂದು ಸೂಚಿಸಿದರು.