ದಾನಿಗಳ ಸಹಕಾರ ಮರೆಯುವಂತಿಲ್ಲ: ಅಡ್ವೊಕೇಟ್ ಜಗದೀಶ್ ಹೆಗ್ಡೆ
ಮಲಾಡ್ ಕನ್ನಡ ಸಂಘ: ಸ್ವಾತಂತ್ರ್ಯೋತ್ಸವ, ಆಶ್ರಮದ ಮಕ್ಕಳಿಗೆ ಸಹಾಯ
Team Udayavani, Aug 26, 2021, 1:41 PM IST
ಮಲಾಡ್: ಮಲಾಡ್ ಕನ್ನಡ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತೀವರ್ಷದಂತೆ ಈ ವರ್ಷವೂ ಮಲಾಡ್ ಪರಿಸರದ ಸ್ವಾಗತ್ ಆಶ್ರಮಕ್ಕೆ ಭೇಟಿ ನೀಡಿ ಅನಾಥಾಶ್ರಮದ ಸುಮಾರು ನಲ್ವತ್ತು ಮಕ್ಕಳಿಗೆ ಬಟ್ಟೆ, ಅಕ್ಕಿ, ಗೋಧಿ, ದವಸ ಧಾನ್ಯ ಹಾಗೂ ಮಕ್ಕಳ ದಿನನಿತ್ಯದ ಬಳಕೆಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಮಲಾಡ್ ಕನ್ನಡ ಸಂಘದ ಸದಸ್ಯರ ಉದಾರ ಕೊಡುಗೆ ಹಾಗೂ ದಾನಿಗಳು, ಸಮಾಜ ಸೇವಕರು, ಉದ್ಯಮಿಗಳಾದ ಬಾಬು ಎಸ್. ಶೆಟ್ಟಿ, ಸಾಧು ಟಿ. ಶೆಟ್ಟಿ, ದಯಾನಂದ ಎಂ. ಶೆಟ್ಟಿ, ಪಿ. ವಿ. ಲಕ್ಷ್ಮೀನಾರಾಯಣ ಹಾಗೂ ತಿಮ್ಮಪ್ಪ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸ್ವಹಸ್ತದಿಂದ ಆಶ್ರಮದಲ್ಲಿ ಮಕ್ಕಳಿಗೆ ದಿನೋಪಯೋಗಿ ವಸ್ತು ಗಳನ್ನು ವಿತರಿಸಲಾಯಿತು.
ಇದನ್ನೂ ಓದಿ:ಸೂರ್ಯನಿಗೆ ಒಂದೊಂದು ರಾಶಿ ಕ್ರಮಿಸಲು ಒಂದು ತಿಂಗಳು ಬೇಕು…ಸಂಕ್ರಮಣ ಕಾಲ ಎಂದರೇನು?
ವರ್ಷಂಪ್ರತಿ ಸ್ವಾತಂತ್ರ್ಯದಿನದಂದು ಅನಾಥಾಶ್ರಮಕ್ಕೆ ಭೇಟಿ ನೀಡಿ ಮಕ್ಕಳು, ವೃದ್ಧರಿಗೆ ಸಹಾಯ ಮಾಡುವ ಕಾರ್ಯಕ್ರಮ ಮಲಾಡ್ ಕನ್ನಡ ಸಂಘವು ಹಮ್ಮಿಕೊಂಡಿದ್ದು, ಈ ಬಾರಿಯೂ ಈ ಕಾರ್ಯಕ್ರಮವು ಯಶಸ್ವಿಯಾಗಿದೆ. ಸಂಘದ ನಿಸ್ವಾರ್ಥ ಸದಸ್ಯರ ಸೇವೆ ಕಠಿನ ಪರಿಸ್ಥಿತಿಯಲ್ಲೂ ಸಹಾಯಧನ ನೀಡಿ ಸಹಕರಿಸಿದ ದಾನಿಗಳನ್ನು ಸಂಘದ ಅಧ್ಯಕ್ಷ ಅಡ್ವೊಕೇಟ್ ಜಗದೀಶ್ ಹೆಗ್ಡೆ ಅಭಿನಂದಿಸಿದರು.
ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ಸಂಘದ ಗೌರವ ಕಾರ್ಯದರ್ಶಿ ಶಂಕರ ಡಿ. ಪೂಜಾರಿ, ಗೌರವ ಕೋಶಾಧಿಕಾರಿ ಪ್ರಕಾಶ್ ಎಸ್. ಶೆಟ್ಟಿ, ಜತೆ ಕಾರ್ಯದರ್ಶಿ ಅನಿಲ್ ಎಸ್. ಪೂಜಾರಿ, ಜತೆ ಕೋಶಾಧಿಕಾರಿ ಶಂಕರ್ ಆರ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತಿ ಬಾಲಚಂದ್ರ ರಾವ್, ಕಾರ್ಯದರ್ಶಿ ಶಾಂಭವಿ ಬಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ, ಕಾರ್ಯದರ್ಶಿ ಸುಂದರ ಪೂಜಾರಿ ಹಾಗೂ ಸಮಿತಿಯ ಸದಸ್ಯರು ಸಹಕರಿಸಿದರು.