ಪ್ರವೀಣ್ ಶೆಟ್ಟಿ ಪುತ್ತೂರು ಪುಣೆ ಅವರಿಗೆ ತೌಳವ ಪ್ರಶಸ್ತಿ ಪ್ರದಾನ
Team Udayavani, Apr 2, 2019, 3:14 PM IST
ಪುಣೆ: ತುಳು ಭಾಷೆ, ಕಲೆ, ಸಂಸ್ಕೃತಿ, ಅಚಾರ-ವಿಚಾರಗಳನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಸ್ಥಾಪನೆಗೊಂಡ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಇದರ ದಶ ಸಂಭ್ರಮದ ಅಂಗವಾಗಿ ಅಯೋಜಿಸಲಾಗಿದ್ದ ತೌಳವ ಉಚ್ಚಯ ಕಾರ್ಯಕ್ರಮವು ಮಾ. 29 ಮತ್ತು ಮಾ. 30ರಂದು ಮಂಗಳೂರು ಪುರಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ತುಳು ಉಚ್ಚಯ ಕಾರ್ಯಕ್ರಮವನ್ನು ಶ್ರೀ ಗುರುದೇವ ದತ್ತ ಸಂಸ್ಥಾನಂ ಒಡಿಯೂರಿನ ಪರಮಪೂಜ್ಯ ಗುರುದೇವಾನಂದ ಸ್ವಾಮೀಜಿ ಅವರು ಉದ್ಘಾಟಿಸಿದರು. ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಟuಲದಾಸ ಸ್ವಾಮೀಜಿ, ಮಾಣಿಲ ಶ್ರೀ ಮೋಹನ್ ದಾಸ ಸ್ವಾಮೀಜಿ, ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಯೋಗಿಶ್ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿ, ತೌಳವ ಉಚ್ಚಯ ಸಮಿತಿಯ ಅಧ್ಯಕ್ಷ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಲೀಲಾದರ ಶೆಟ್ಟಿ ಕಾಪು, ಉದಯ ಶೆಟ್ಟಿ ಮುನಿಯಾಲ್, ಭಾಸ್ಕರ್ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತುಳು ಭಾಷೆ, ಕಲೆ, ಸಂಸ್ಕೃತಿಯ ಮೇಲೆ ಪ್ರೀತಿಯಿಟ್ಟು ನಿರಂತರ ಸೇವೆಗೈಯುತ್ತಿರುವ ಮಹಾನೀಯರನ್ನು ತೌಳವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೊರನಾಡಿನಲ್ಲಿರುವ ತುಳುಭಾಷೆಯ ಸೇವೆಗೈಯುತ್ತಿರುವ ಪುಣೆಯ ಉದ್ಯಮಿ. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇದರ ಸಂಸ್ಥಾಪಕ, ಪುಣೆ ಬಂಟರ ಸಂಘದ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ, ಕಲಾ ಸೇವಕ, ದಾನಿ ಹಾಗೂ ಪ್ರವೀಣ್ ಶೆಟ್ಟಿ ಪುತ್ತೂರು ಪುಣೆ ಇವರನ್ನು ಗಣ್ಯರ ಸಮ್ಮುಖದಲ್ಲಿ ತೌಳವ ಪ್ರಶಸ್ತಿಯನ್ನು ನೀಡಿ ಸಮ್ಮಾನಿಸಿ ಗೌರವಿಸಲಾಯಿತು.
ವರದಿ: ಹರೀಶ್ ಮೂಡಬಿದ್ರೆ