ವಿಪಿಎಂ ಶಾಲೆ: ಅಂತರ್ಶಾಲಾ ಪ್ರತಿಭಾ ಸ್ಪರ್ಧೆ, ಬಹುಮಾನ ವಿತರಣೆ
Team Udayavani, Sep 18, 2018, 4:24 PM IST
ಮುಂಬಯಿ: ಮಾನಸಿಕ ಹಾಗೂ ಶಾರೀರಿಕವಾಗಿ ಸುದೃಢವಾದ ಶಿಕ್ಷಣವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ಶಿಕ್ಷಣವು ಸ್ವಾವಲಂಬನೆ, ಆತ್ಮಸ್ಥೈರ್ಯ, ಆತ್ಮವಿಶ್ವಾಸವನ್ನು ಮೂಡಿಸುವಂತಿರಬೇಕು. ವ್ಯಕ್ತಿತ್ವ ವಿಕಾಸ ಮಾಡುವುದರ ಜೊತೆಗೆ ಸರ್ವಾಂ ಗೀಣ ವಿಕಾಸದ ಮನೋ ಭಾವನೆ ಯನ್ನು ಬೆಳೆಸಿಕೊಳ್ಳುವ ಭಾವನೆ ಮೂಡಿಸುವಂತಿರಬೇಕು. ಮನುಷ್ಯ ತ್ವದ ಹಾಗೂ ಮಾನವೀಯತೆಯ ಸದ್ವಿಚಾರಗಳನ್ನು ಬೆಳೆಸುವ ವಿದ್ವತ್ತನ್ನು ವಿಕಾಸಗೊಳಿಸಿ ಪ್ರಕಾಶಿಸುವಂತಿರ ಬೇಕು. ಆಧುನಿಕ ಪ್ರಹಾರದ ಜೊತೆಗೆ ನೈತಿಕತೆಯ ಸದ್ವಿಕಾಸದ ಮುಖದ ಕಡೆಗೆ ಸಾಗುವಂತಿರಬೇಕು ಎಂದು ವಡಾಲ ಎನ್ಕೆಇಎಸ್ ಶಿಕ್ಷಣ ಸಂಸ್ಥೆಯ ಪದಾಧಿಕಾರಿ, ರಂಗಕರ್ಮಿ ಕೆ. ಮಂಜುನಾಥಯ್ಯ ಅವರು ಅಭಿ ಪ್ರಾಯಿಸಿದರು.
ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ವಿದ್ಯಾ ಪ್ರಸಾರಕ ಮಂಡಳದ ಸುವರ್ಣ ಮಹೋತ್ಸವದ ಸ್ಮರಣಾರ್ಥ 9ನೇ ವಾರ್ಷಿಕ ಚಲಿತ ಫಲಕಕ್ಕಾಗಿ ಅಂತರ ಶಾಲಾ ಪ್ರತಿಭಾ ಸ್ಪರ್ಧೆಯು ಸೆ. 6 ರಂದು ಮುಲುಂಡ್ ವಿಪಿಎಂ ಶಿಕ್ಷಣ ಸಂಕುಲದ ಸಭಾಗೃಹದಲ್ಲಿ ನಡೆದಿದ್ದು, ಸ್ಪರ್ಧೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಮಹೋನ್ನತ ಸಂಸ್ಥೆಯನ್ನು ಸ್ಥಾಪಿಸಿ ಇಷ್ಟು ವರ್ಷಗಳ ಕಾಲ ಸುವ್ಯವಸ್ಥಿತವಾಗಿ ನಿರರ್ಗಳವಾಗಿ, ಅಲೆಗಳು ಭೋರ್ಗರೆಯುವಂತೆ ಶೈಕ್ಷ ಣಿಕ ಕ್ರಾಂತಿಯನ್ನೇ ಸೃಷ್ಟಿಸಿ ಇತಿಹಾಸ ನಿರ್ಮಿಸಿದ ವಿಪಿಎಂ ಮಂಡಳದ ಕಾರ್ಯವೈಖರಿ ಅಭಿನಂದನೀಯ. ಸಂಸ್ಥೆಯನ್ನು ಹುಟ್ಟುಹಾಕುವುದು ಒಂದು ಮಹತ್ತರ ಕಾರ್ಯವಾದರೆ, ಅದನ್ನು ಉನ್ನತ ಮಟ್ಟಕ್ಕೇರಿಸುವ ಕಾರ್ಯ ಪ್ರವೃತ್ತಿಯ ಅಸಾಮಾನ್ಯದ ಪ್ರೇರಕ ಶಕ್ತಿ, ಯುಕ್ತಿಯ ಕೆಲಸ ಅಪಾರ ಹಾಗೂ ಅನನ್ಯವೇ ಸರಿ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಳದ ಪ್ರಧಾನ ಕಾರ್ಯದರ್ಶಿ ಡಾ| ಪಿ. ಎಂ. ಕಾಮತ್ ಅವರು ಅತಿಥಿಗಳನ್ನು ಗೌರವಿಸಿ ಮಾತನಾಡಿ, ಮುಂಬಯಿಯಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ವಿದ್ಯಾ ಪ್ರಸಾರಕ ಮಂಡಳವು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ, ಉಚಿತ ಸಮವಸ್ತ್ರ ವಿತರಣೆ, ಉಚಿತ ಪಠ್ಯ ಪುಸ್ತಕಗಳ ವಿತರಣೆ, ವರ್ಗಕೋಣೆಯಲ್ಲಿ ಬೋಧಿಸುವ ಉಚಿತ ಆಧುನಿಕ ಸ್ಮಾರ್ಟ್ ಬೋರ್ಡ್
ಸೌಲಭ್ಯ, ಉಚಿತ ಶಾಲಾ ಬಸ್ಸಿನ ವ್ಯವಸ್ಥೆ, ಉಚಿತ ಶಾಲಾ ಪರಿಕರಗಳು ಹೀಗೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕಾಗಿ, ಪ್ರಗತಿಗಾಗಿ ಸದಾ ಕನ್ನಡ ವಿದ್ಯಾರ್ಥಿಗಳಿಗೆ ಅಕ್ಷಯ ಪಾತ್ರೆಯಾಗಿದೆ. ಬಡತನದಿಂದ ಸಮಸ್ಯೆಯನ್ನು ಎದುರಿಸುತ್ತಿರುವ ವರಿಗೆ ಶಿಕ್ಷಣ ಕೊಡಲು ವಿದ್ಯಾ ಪ್ರಸಾರಕ ಮಂಡಳವು ಪಡುವ ಶ್ರಮ ಅಪಾರವಾಗಿದೆ, ಕನ್ನಡ ಮಾತೃ ಭಾಷೆಯಲ್ಲಿ ವಿದ್ಯಾರ್ಜನೆ ಮಾಡುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕಲಿಕೆಯ ಎಲ್ಲ ರೀತಿಯ ಸೌಕರ್ಯ ಮತ್ತು ಸೌಲಭ್ಯವನ್ನು, ಪ್ರೋತ್ಸಾಹವನ್ನು ವಿದ್ಯಾ ಪ್ರಸಾರಕ ಮಂಡಳವು ನೀಡಲು ಸದಾ ಸಿದ್ಧವಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಶಾಲೆಗಳ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿ ಎಲ್ಲರಿಗೂ ಶುಭ ಹಾರೈಸಿದರು.
ಕಾರ್ಯಕ್ರಮವು ವಿದ್ಯಾರ್ಥಿನಿ ಯರ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾಯಿತು. ಛದ್ಮವೇಷ, ದಾಸರ ಪದ, ಭಾವಗೀತ, ಸಮೂಹಗೀತೆ, ಭಾಷಣ, ಚಿತ್ರಕಲಾ ಸ್ಪರ್ಧೆ, ಕವಿತಾ ವಾಚನ ಇತ್ಯಾದಿ ಸ್ಪರ್ಧೆಗಳು ನಡೆದವು. ವೇದಿಕೆಯಲ್ಲಿ ಮುಖ್ಯ ಅತಿಥಿ ಕೆ. ಮಂಜುನಾಥಯ್ಯ, ಡಾ| ಮಂಜುನಾಥ, ಪ್ರಧಾನ ಕಾರ್ಯದರ್ಶಿ ಡಾ| ಪಿ. ಎಂ. ಕಾಮತ್, ಕೋಶಾಧಿಕಾರಿ ಪ್ರೊ| ಸಿ. ಜೆ. ಪೈ ಹಾಗೂ ಮಾಧ್ಯಮಿಕ ಮತ್ತು ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸುವಿನಾ ಶೆಟ್ಟಿ ಹಾಗೂ ಅರುಣಾ ಭಟ್ ಉಪಸ್ಥಿತರಿದ್ದರು.
ನಿರ್ಣಾಯಕರಾಗಿ ಡಾ| ಕರುಣಾಕರ್ ಶೆಟ್ಟಿ, ಪಂಡಿತ ಗಿರೀಶ್ ಸಾರವಾಡ, ಎಂ. ಎಸ್. ಜಲದೆ, ಅಶ್ವಿನಿ ನಾಡ ಪುರೋಹಿತ, ಭಾರತಿ ಜೋಶಿ, ಕಸ್ತೂರಿ ಐನಾಪುರ ಇವರು ಸಹಕರಿಸಿದರು. ಜಯಂತಿ ಸತೀಶ್ ಐಲ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಕ ರಮೇಶ ಚಾನಕೋಟೆ ಹಾಗೂ ಶಿಕ್ಷಕಿ ಗೌರಿ ದೇಶಪಾಂಡೆ ಅತಿಥಿ ಗಣ್ಯರು ಹಾಗೂ ನಿರ್ಣಾಯಕರನ್ನು ಪರಿಚಯಿಸಿದರು. ಥಾಣೆಯ ನವೋದಯ ಶಾಲೆಯು ಚಲಿತ ಫಲಕವನ್ನು ತಮ್ಮದಾಗಿಸಿಕೊಂಡಿತು. ರಮೇಶ ಚಾನಕೋಟೆ ಹಾಗೂ ಶಿಕ್ಷಕಿ ಗೌರಿ ದೇಶಪಾಂಡೆ ಅತಿಥಿಗಳನ್ನು ಪರಿಚಯಿಸಿದರು. ಸ್ಪರ್ಧಾ ವಿಜೇತರ ಹಾಗೂ ತಂಡಗಳ ಯಾದಿಯನ್ನು ಜ್ಯೋತಿ. ಡಿ. ಕುಲಕರ್ಣಿಯವರು ಓದಿದರು. ಶಾಲೆಯ ಪರಿವೀಕ್ಷಕಿ ರತ್ನಾ ಕುಲಕರ್ಣಿ ವಂದಿಸಿದರು.