ವರ್ಲಿ ಅಪ್ಪಾಜಿಬೀಡು ಫೌಂಡೇಷನ್: ಸಾಧಕರಿಗೆ ಸಮ್ಮಾನ
Team Udayavani, Aug 3, 2018, 12:56 PM IST
ಮುಂಬಯಿ: ಕಾಪುವಿನಿಂದ ನೇಪಾಳ ಮತ್ತು ಭೂತಾನ್ ದೇಶಗಳ ಜನಜೀವನ, ಅಲ್ಲಿನ ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಧಾರ್ಮಿಕ ವಿಚಾರಗಳ ಬಗ್ಗೆ ಅಧ್ಯಯನ ನಡೆಸುತ್ತಾ ಜನಸಾಮಾನ್ಯರಿಗೆ ಯೂ ಟ್ಯೂಬ್ನ ಮೂಲಕ ನಿತ್ಯ ತಿಳಿಸುವ ಯೋಜನೆಯೊಂದಿಗೆ ಗೋ-ಹಿಮಾಲಯನ್ ಎಂಬ ಬೈಕ್ ರ್ಯಾಲಿಯಲ್ಲಿ ಹೊರಟಿರುವ ಕಾಪುವಿನ ಪ್ರಸಿದ್ಧ ಛಾಯಾಚಿತ್ರಕಾರ ಸಚಿನ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ಅವರು ಮುಂಬಯಿಗೆ ಪ್ರವೇಶಿಸಿದ್ದು, ಅವರನ್ನು ವರ್ಲಿಯ ಅಪ್ಪಾಜಿಬೀಡು ಫೌಂಡೇಷನ್ ವತಿಯಿಂದ ಸ್ವಾಗತಿಸಿ ಅವರನ್ನು ಗೌರವಿಸಲಾಯಿತು.
ಈ ಇಬ್ಬರನ್ನು ಫೌಂಡೇಷನ್ನ ಸಂಸ್ಥಾಪಕರಾದ ಪಡುಬಿದ್ರೆ ಬೇಂಗ್ರೆ ರಮೇಶ್ ಗುರುಸ್ವಾಮಿ ಮತ್ತು ಆಡಳಿತ ಟ್ರಸ್ಟಿ ಶಾಂಭವಿ ಶೆಟ್ಟಿ, ಅಧ್ಯಕ್ಷ ಕೇದಗೆ ಸುರೇಶ್ ಶೆಟ್ಟಿ ಅವರು ಶಾಲು ಹೊದೆಸಿ, ಯಾತ್ರೆಯ ವೆಚ್ಚಕ್ಕಾಗಿ ನಗದು ನೀಡಿ ಗೌರವಿಸಿ ಶುಭಹಾರೈಸಿದರು.
ಸಚಿನ್ ಮತ್ತು ಅಭಿಷೇಕ್ ಇಬ್ಬರು ಭಾರತ-ನೇಪಾಳ-ಭೂತಾನ್ ಈ ಮೂರು ದೇಶಗಳನ್ನು ಬೈಕ್ ಮೂಲಕ ಸುತ್ತಿ ಬರಲಿದ್ದು, ಒಟ್ಟು 40 ದಿನಗಳು, 13,560 ಕಿ. ಮೀ. ದೂರ ಕ್ರಮಿಸಲಿದ್ದಾರೆ. ಇವರನ್ನು ಗೌರವಿಸಿದ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ಕೇದಗೆ ಭೋಜ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ವಸಂತ್ ಪೂಜಾರಿ, ಕೋಶಾಧಿಕಾರಿ ಹರೀಶ್ ಶೆಟ್ಟಿ ಮತ್ತು ಬೆಳ್ಳಿಹಬ್ಬ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್ ಕುಲಾಲ್ ಹಾಗೂ ಪ್ರವೀಣ್ ಶೆಟ್ಟಿ ಕುರ್ಕಾಲ್, ಉದಯ ಶೆಟ್ಟಿ ಮುದ್ರಾಡಿ, ಭರತ್ ಶೆಟ್ಟಿ, ಪದ್ಮನಾಭ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.