Asia Cup; ಮಳೆ ಪಾಲಾಗದಿರಲಿ ನೇಪಾಲ ಪಂದ್ಯ: ಭಾರತಕ್ಕೆ ರದ್ದುಗೊಂಡರೂ ಲಾಭ
ಭಾರತ-ನೇಪಾಲ ನಡುವಿನ ಮೊದಲ ಅಂತಾರಾಷ್ಟ್ರೀಯ ಪಂದ್ಯ
Team Udayavani, Sep 4, 2023, 7:00 AM IST
ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಪಲ್ಲೆಕೆಲೆ ಪಂದ್ಯಗಳಿಗೆ ಮಳೆ ಭೀತಿ ಎದುರಾಗಿದೆ. ಶನಿವಾರದ ಭಾರತ-ಪಾಕಿಸ್ಥಾನ ನಡು ವಿನ ಬಹು ನಿರೀಕ್ಷೆಯ ಮುಖಾಮುಖೀ ವರುಣನ ಅವಕೃಪೆಗೆ ಸಿಲುಕಿ ರದ್ದು ಗೊಂಡಿತ್ತು. ಸೋಮವಾರ ಇದೇ ಅಂಗ ಳದಲ್ಲಿ ಭಾರತ-ನೇಪಾಲ ಎದುರಾಗ ಲಿವೆ. ಈ ಪಂದ್ಯಕ್ಕೂ ಮಳೆ ಭೀತಿ ತಪ್ಪಿದ್ದಲ್ಲ ಎನ್ನುತ್ತಿದೆ ಹವಾಮಾನ ವರದಿ.
ಭಾರತದ ಸೂಪರ್-4 ಪ್ರವೇಶಕ್ಕೆ ಈ ಪಂದ್ಯ ನಿರ್ಣಾಯಕ. ರೋಹಿತ್ ಪಡೆಗೆ ಇಲ್ಲಿ ಗೆಲುವು ಅನಿವಾರ್ಯ. ಪಂದ್ಯ ರದ್ದುಗೊಂಡರೂ ನಮ್ಮ ತಂಡಕ್ಕೆ ಮುಂದಿನ ಸುತ್ತಿನ ಬಾಗಿಲು ತೆರೆಯುತ್ತದೆ. ಆದರೆ ಯಾವ ಕಾರಣಕ್ಕೂ ನೇಪಾಲಕ್ಕೆ ಸೋಲಬಾರದು; ಅಂಥ ಸಾಧ್ಯತೆಯೂ ಇಲ್ಲ, ಬಿಡಿ.
“ಎ’ ವಿಭಾಗದಿಂದ ಪಾಕಿಸ್ಥಾನ ಈಗಾಗಲೇ ಸೂಪರ್-4 ಪ್ರವೇಶಿಸಿದೆ. ಅದು 3 ಅಂಕ ಹೊಂದಿದೆ. ಭಾರತದ ಕೈಲಿರುವುದು ಒಂದೇ ಅಂಕ. ಒಂದು ವೇಳೆ ನೇಪಾಲ ವಿರುದ್ಧದ ಪಂದ್ಯ ರದ್ದುಗೊಂಡರೆ ಒಂದಂಕ ಲಭಿಸಲಿದೆ. ಆಗ ಟೀಮ್ ಇಂಡಿಯಾ 2 ಅಂಕ ಹೊತ್ತು ಸೂಪರ್-4 ತಲುಪಲಿದೆ. ನೇಪಾಲ ಮುಂದಿನ ಹಂತ ಪ್ರವೇಶಿಸಬೇಕಾದರೆ ಭಾರತವನ್ನು ಮಣಿಸಬೇಕು.ಇದು ಭಾರತ-ನೇಪಾಲ ನಡುವಿನ ಮೊದಲ ಅಂತಾರಾಷ್ಟ್ರೀಯ ಪಂದ್ಯ ವೆಂಬುದು ವಿಶೇಷ.
ಬ್ಯಾಟಿಂಗ್ ವೈಫಲ್ಯ
ಪಾಕಿಸ್ಥಾನ ವಿರುದ್ಧ ಭಾರತ 266 ರನ್ ಗಳಿಸಿತಾದರೂ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಚಿಂತೆಗೀಡು ಮಾಡಿದೆ. ವಿಶ್ವಕಪ್ ಕ್ಷಣಗಣನೆ ಆರಂಭ ಗೊಂಡ ಈ ಹೊತ್ತಿನಲ್ಲಿ ರೋಹಿತ್ ಶರ್ಮ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಸಾಲು ಸಾಲಾಗಿ ಕೈಕೊಟ್ಟಿರುವುದು ಶುಭ ಲಕ್ಷಣವಂತೂ ಅಲ್ಲ. ಪಾಕ್ ವಿರುದ್ಧ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಕ್ರೀಸ್ ಆಕ್ರಮಿಸಿಕೊಳ್ಳದೇ ಹೋಗಿದ್ದರೆ ಭಾರತದ ಕತೆ ಗಂಡಾಂತರವಾಗುತ್ತಿತ್ತು. ಪಾಕ್ ಭಾರತಕ್ಕಿಂತಲೂ ಉತ್ತಮವಾದ ಬೌಲಿಂಗ್ ಹಾಗೂ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ. ಹೀಗಾಗಿ ಪಂದ್ಯ ಪೂರ್ತಿ ನಡೆದದ್ದೇ ಆದಲ್ಲಿ ಫಲಿತಾಂಶ ಏನಾಗುತ್ತಿತ್ತೋ ಹೇಳಲಾಗದು. ಅಕಸ್ಮಾತ್ ಭಾರತ ಸೋತದ್ದೇ ಆದಲ್ಲಿ ನೇಪಾಲ ವಿರುದ್ಧ ಮಾಡು-ಮಡಿ ಸ್ಥಿತಿ ಎದುರಾಗುತ್ತಿತ್ತು.
ಸದ್ಯ ರೋಹಿತ್ ಪಡೆ ಈ ಸ್ಥಿತಿಯಿಂದ ಪಾರಾಗಿದೆ. ಆದರೆ ಬೌಲಿಂಗ್ ಟ್ರ್ಯಾಕ್ನಲ್ಲಿ ಭಾರತದ ಬ್ಯಾಟರ್ಗಳ ಪರದಾಟ ಮುಂದುವರಿದಿರುವುದು, ಘಾತಕ ವೇಗಿಗಳ ದಾಳಿಯನ್ನು ತಡೆದು ನಿಲ್ಲಲು ವಿಫಲವಾಗಿರುವುದು ಸಾಬೀತಾಗಿದೆ. ಮುಖ್ಯವಾಗಿ ರೋಹಿತ್ ಮತ್ತು ಕೊಹ್ಲಿ ಅವರ ಹಿಂದಿನ ಬ್ಯಾಟಿಂಗ್ ಚಾರ್ಮ್ ಕಂಡುಬಂದಿಲ್ಲ. ಗಿಲ್ ಅವರಂತೂ ಸಿಕ್ಕಾಪಟ್ಟೆ ಪರದಾಟ ನಡೆಸಿದ್ದಾರೆ. ಅಯ್ಯರ್ ಕೂಡ ಅವಕಾಶವನ್ನು ಬಳಸಿಕೊಂಡಿಲ್ಲ. ಅಫ್ರಿದಿ, ನಸೀಮ್, ರವೂಫ್ ಎಸೆತಗಳಿಗೆ ನಮ್ಮ ಅಗ್ರ ಬ್ಯಾಟಿಂಗ್ ಸರದಿ ಅದುರಿದ್ದು ಸ್ಪಷ್ಟ. ನೇಪಾಲ ವಿರುದ್ಧ ಇವರೆಲ್ಲ ಮೈಚಳಿ ಬಿಟ್ಟು ಆಡಬೇಕಿದೆ.
ರಕ್ಷಣಾತ್ಮಕ ತಂತ್ರವನ್ನು ಕೈಬಿಟ್ಟು ಮುನ್ನುಗ್ಗಿ ಬಾರಿಸಿದರೆ ರನ್ ಪೇರಿಸ ಬಹುದು, ಎದುರಾಳಿ ಬೌಲರ್ಗಳಿಗೆ ಬೆವರಿಳಿಸಬಹುದು ಎಂಬುದನ್ನು ಇಶಾನ್ ಕಿಶನ್ ಮತ್ತು ಪಾಂಡ್ಯ ತೋರಿಸಿಕೊಂಡಿದ್ದಾರೆ. ಎಲ್ಲರೂ ಸ್ಫೋಟಕ ಆಟಕ್ಕೆ ಮುಂದಾಗಬೇಕೆಂದೇನೂ ಇಲ್ಲ. ಇಬ್ಬರಲ್ಲೊಬ್ಬರು ಬೀಸಲಾರಂಭಿಸಿದರೂ ಸಾಕು. ಆದರೆ ಅಗ್ರ ಕ್ರಮಾಂಕದ ವೈಫಲ್ಯದಿಂದ ಮಧ್ಯಮ ಸರದಿ ಮೇಲೆ ಒತ್ತಡ ಬಿದ್ದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಅದೃಷ್ಟವಶಾತ್ ಪಾಕ್ ವಿರುದ್ಧ ಇಂಥ ಸ್ಥಿತಿ ಎದುರಾಗಲಿಲ್ಲ.
ಭಾರತದ ಬೌಲಿಂಗ್ ಸಾಮರ್ಥ್ಯವನ್ನು ಅರಿಯಲಾಗದಿದ್ದುದು ನಿರಾಸೆಯ ಸಂಗತಿ. ಹಾಗೆಯೇ ಪಾಕ್ ಎದುರಿನ ಮಹ ತ್ವದ ಮುಖಾಮುಖೀಗೆ ಮೊಹ ಮ್ಮದ್ ಶಮಿ ಅವರಂಥ ಅನುಭವಿ ಬೌಲರ್ನನ್ನು ಕೈಬಿಟ್ಟದ್ದು ಅಚ್ಚರಿ ಹಾಗೂ ಅರ್ಥವಾಗದ ಸಂಗತಿ!
ನೇಪಾಲಕ್ಕೊಂದು ಅನುಭವ
ಲೆಗ್ಸ್ಪಿನ್ನರ್ ಸಂದೀಪ್ ಲಮಿಚಾನೆ, ನಾಯಕ ರೋಹಿತ್ ಪೌದೆಲ್ ನೇಪಾಲದ ದೊಡ್ಡ ಭರವಸೆಗಳಾಗಿದ್ದಾರೆ. ಉಳಿದಂತೆ ಇಲ್ಲಿ ಗಮನಾರ್ಹ ಹೆಸರುಗಳು ಕಾಣಿಸುತ್ತಿಲ್ಲ.ಅನನುಭವಿ ನೇಪಾಲಕ್ಕೆ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದೇ ಒಂದು ಖುಷಿಯ ಸಂಗತಿ. ಏಷ್ಯಾದ ಕ್ರಿಕೆಟ್ ಪವರ್ಹೌಸ್ ಎನಿಸಿದ ತಂಡಗಳೆದುರು ಆಡಿದ್ದು ನಿಜಕ್ಕೂ ಸ್ಮರಣೀಯ ಅನುಭವ. ಪುಟ್ಟ ದೇಶದ ಕ್ರಿಕೆಟ್ ಪ್ರಗತಿಯಲ್ಲಿ ಇದೊಂದು ಮೆಟ್ಟಿಲು ಎನ್ನಲಡ್ಡಿಯಿಲ್ಲ.