Asia Cup; ಪಾಕ್ -ಲಂಕಾ ಸೆಮಿಫೈನಲ್: ಭಾರತದ ಫೈನಲ್ ಎದುರಾಳಿ ಯಾರು?
Team Udayavani, Sep 14, 2023, 6:45 AM IST
ಕೊಲಂಬೊ: ಸೂಪರ್-4 ಹಂತದ ಎರಡೂ ಪಂದ್ಯಗಳನ್ನು ಅಮೋಘ ರೀತಿಯಲ್ಲಿ ಗೆದ್ದು, ಎರಡು ಪಂದ್ಯ ಬಾಕಿ ಇರುವಾಗಲೇ ಫೈನಲ್ಗೆ ಲಗ್ಗೆಯಿಟ್ಟಿರುವ ಭಾರತವೀಗ ತನ್ನ ಎದುರಾಳಿಯ ನಿರೀಕ್ಷೆಯಲ್ಲಿದೆ. ರವಿವಾರದ ಪ್ರಶಸ್ತಿ ಸಮರದಲ್ಲಿ ಮತ್ತೆ ಪಾಕಿಸ್ಥಾನ ಎದುರಾಗಬಹುದೋ ಅಥವಾ ಆತಿಥೇಯ ಶ್ರೀಲಂಕಾ ಸಿಗಬಹುದೋ ಎಂಬ ಕುತೂಹಲ ಪರಾಕಾಷ್ಠೆ ತಲುಪಿದೆ. ಇದಕ್ಕೆ ಉತ್ತರ ಗುರುವಾರ ರಾತ್ರಿ ಲಭಿಸಲಿದೆ. ಇಲ್ಲಿ ಪಾಕಿಸ್ಥಾನ-ಶ್ರೀಲಂಕಾ ಮುಖಾಮುಖೀ ಆಗಲಿವೆ. ಗೆದ್ದ ತಂಡ ಫೈನಲ್ ಪ್ರವೇಶಿಸುವುದರಿಂದ ಸಹಜವಾಗಿಯೇ ಈ ಪಂದ್ಯಕ್ಕೆ ಸೆಮಿಫೈನಲ್ ಮಹತ್ವ ಲಭಿಸಿದೆ.
ಮಂಗಳವಾರದ ಮುಖಾಮುಖಿಯಲ್ಲಿ ಶ್ರೀಲಂಕಾ ವನ್ನು 41 ರನ್ನುಗಳಿಂದ ಮಣಿಸುವ ಮೂಲಕ ಭಾರತ ಅಧಿಕಾರಯುತವಾಗಿ ಫೈನಲ್ ಪ್ರವೇಶಿಸಿತು. ಇದರಿಂದ ಬಾಂಗ್ಲಾದೇಶ ಕೂಟ ದಿಂದ ಹೊರಬಿತ್ತು. ಭಾರತದ ಗೆಲುವಿನಿಂದ ಲಾಭವಾದದ್ದು ಪಾಕಿಸ್ಥಾನಕ್ಕೆ. ಇದರಿಂದ ಬಾಬರ್ ಪಡೆ ಫೈನಲ್ ರೇಸ್ನಲ್ಲಿ ಉಳಿಯುವಂತಾಯಿತು. ಅಕಸ್ಮಾತ್ ಗುರುವಾರದ ಪಂದ್ಯ ಮಳೆಯಿಂದ ರದ್ದಾದರೆ ಇದರಿಂದ ಲಂಕೆಗೆ ಲಾಭವಾಗಲಿದೆ. ಅದು ರನ್ರೇಟ್ನಲ್ಲಿ ಪಾಕಿಸ್ಥಾನಕ್ಕಿಂತ ಮುಂದಿದೆ. ಲಂಕಾ -0.200, ಪಾಕ್ -1.892 ರನ್ರೇಟ್ ಹೊಂದಿದೆ.
ಈ ಮುಖಾಮುಖೀ ಬಳಿಕ ಶುಕ್ರವಾರ ಭಾರತ ತನ್ನ ಕೊನೆಯ ಸೂಪರ್-4 ಪಂದ್ಯ ದಲ್ಲಿ ಬಾಂಗ್ಲಾ ದೇಶವನ್ನು ಎದುರಿಸುವ ಕಾರ್ಯಕ್ರಮ ವೊಂದಿದೆ. ಇದೊಂದು ಲೆಕ್ಕದ ಭರ್ತಿಯ ಪಂದ್ಯವಾದರೂ ರೋಹಿತ್ ಪಡೆಗೆ ಫೈನಲ್ ರಿಹರ್ಸಲ್ ಆಗುವುದರಲ್ಲಿ ಅನುಮಾನವಿಲ್ಲ.
ಸಮಬಲ ಸಾಧನೆ
ಸೂಪರ್-4 ಹಂತದಲ್ಲಿ ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳದ್ದು ಸಮಬಲ ಸಾಧನೆ. ಎರಡೂ ತಂಡಗಳು ಬಾಂಗ್ಲಾದೇಶವನ್ನು ಮಣಿ ಸಿವೆ, ಹಾಗೆಯೇ ಭಾರತಕ್ಕೆ ಶರಣಾಗಿವೆ. ಇದರಲ್ಲಿ ಪಾಕಿಸ್ಥಾನದ್ದು ಹೀನಾಯ ಸೋಲಾದರೆ, ಲಂಕೆಯದ್ದು ವೀರೋಚಿತ ಸೋಲು.
ಭಾರತದ ವಿರುದ್ಧ ಹೀನಾಯವಾಗಿ ಸೋಲು ವುದ ಕ್ಕಿಂತ ಮೊದಲು ಪಾಕಿಸ್ಥಾನ ಬಲಿಷ್ಠ ತಂಡ ವಾಗಿ ಗೋಚರಿಸಿದ್ದು ಸುಳ್ಳಲ್ಲ. ಆದರೆ 228 ರನ್ನುಗಳ ದಾಖಲೆ ಅಂತರದ ಸೋಲು ಪಾಕ್ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಸಾಲದ್ದಕ್ಕೆ ಗಾಯಾಳುಗಳ ಸಮಸ್ಯೆಯೂ ತಂಡವನ್ನು ಕಾಡಿದೆ. ಹ್ಯಾರಿಸ್ ರವೂಫ್ ಮತ್ತು ನಸೀಮ್ ಶಾ ಅನುಪಸ್ಥಿತಿಯಿಂದ ಪಾಕ್ಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಇವರಲ್ಲಿ ನಸೀಮ್ ಶಾ ಏಷ್ಯಾ ಕಪ್ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ. ಇವರ ಬದಲು ಶಹನವಾಜ್ ದಹಾನಿ ಮತ್ತು 150 ಕಿ.ಮೀ. ವೇಗದಲ್ಲಿ ಬೌಲಿಂಗ್ ನಡೆಸಬಲ್ಲ 22 ವರ್ಷದ ಜಮಾನ್ ಖಾನ್ ಬಂದಿದ್ದಾರೆ.
ಲಂಕಾ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ಪಾಕಿಸ್ಥಾನದ ಟಾಪ್ ಆರ್ಡರ್ ಕ್ಲಿಕ್ ಆಗ ಬೇಕಾ ದುದು ಮುಖ್ಯ. ಆರಂಭಿಕರಾದ ಫಖಾರ್ ಜಮಾನ್, ಇಮಾಮ್ ಉಲ್ ಹಕ್, ನಾಯಕ ಬಾಬರ್ ಆಜಂ ದೊಡ್ಡ ಮೊತ್ತ ಗಳಿಸಬೇಕಿದೆ. ರಿಜ್ವಾನ್, ಸಲ್ಮಾನ್ ಆಘಾ, ಇಫ್ತಿ ಖಾರ್ ಅಹ್ಮದ್ ಕೂಡ ಕ್ಲಿಕ್ ಆಗಬೇಕಾದುದು ಮುಖ್ಯ.
ಅಪಾಯಕಾರಿ ಸ್ಪಿನ್ನರ್
ಶ್ರೀಲಂಕಾ ಕೂಡ ಗಾಯದ ಸುಳಿಯಲ್ಲಿ ಸಿಲುಕಿದ ತಂಡ. ಮೊದಲ ಆಯ್ಕೆಯ ಆಟಗಾರ ರಾದ ಹಸರಂಗ, ಚಮೀರ ಮತ್ತು ಲಹಿರು ಕುಮಾರ ಗೈರಲ್ಲಿ ಲಂಕಾ ಹೋರಾಟ ನಡೆಸುತ್ತಿದೆ. ಆದರೆ ದುನಿತ್ ವೆಲ್ಲಲಗೆ, ಮತೀಶ ಪತಿರಣ, ಮಹೀಶ ತೀಕ್ಷಣ ಪರಿಣಾಮಕಾರಿ ಪ್ರದರ್ಶನ ಕಾಯ್ದು ಕೊಂಡು ಬಂದಿದ್ದಾರೆ. ಭಾರತದ ಹತ್ತೂ ವಿಕೆಟ್ಗಳನ್ನು ಕೆಡವಿದ ಸ್ಪಿನ್ನರ್ ಲಂಕೆಯ ಅಪಾಯಕಾರಿ ಅಸ್ತ್ರವಾಗಿದ್ದಾರೆ. ಆದರೆ ನಾಯಕ ದಸುನ್ ಶಣಕ ಮತ್ತು ಪೇಸರ್ ಕಸುನ್ ರಜಿತ ಅವರ ಸತತ ವೈಫಲ್ಯ ಚಿಂತೆಗೀಡು ಮಾಡಿದೆ.
ಅಗ್ರ ಕ್ರಮಾಂಕದ ಬ್ಯಾಟಿಂಗ್ ಮೇಲೆ ಲಂಕಾ ಯಶಸ್ಸು ಅಡಗಿದೆ. ನಿಸ್ಸಂಕ, ಕರುಣಾರತ್ನೆ, ಮೆಂಡಿಸ್, ಸಮರವಿಕ್ರಮ ಮೊದಲಾದವರೆಲ್ಲ ಅಫ್ರಿದಿ ಆ್ಯಂಡ್ ಕಂಪೆನಿಯ ಬೌಲಿಂಗ್ ದಾಳಿ ಯನ್ನು ಎದುರಿಸಿ ನಿಲ್ಲುವುದು ಅತ್ಯಗತ್ಯ. ಅಂದಹಾಗೆ ಇದು ಈ ಕೂಟದಲ್ಲಿ ಶ್ರೀಲಂಕಾ-ಪಾಕಿಸ್ಥಾನ ನಡುವಿನ ಮೊದಲ ಮುಖಾಮುಖಿ ಆಗಿದೆ.