ಆ. 29ಕ್ಕೆ ಅಲ್ಲ, ಸೆ. 25ಕ್ಕೆ ರಾಷ್ಟ್ರೀಯ ಕ್ರೀಡಾಪ್ರಶಸ್ತಿ ಪ್ರದಾನ
Team Udayavani, Jul 26, 2018, 6:00 AM IST
ಹೊಸದಿಲ್ಲಿ: ಈ ಬಾರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ವಿತರಣೆಯ ದಿನಾಂಕದಲ್ಲಿ ಬದಲಾವಣೆ ಸಂಭವಿಸಲಿದೆ. ಮಾಮೂಲಿನಂತೆ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್ ಜನ್ಮದಿನವಾದ ಆ. 29ಕ್ಕೆ ಪ್ರಶಸ್ತಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಏಶ್ಯಾಡ್ ಸಾಧನೆಯನ್ನೂ ಗಣನೆಗೆ ತೆಗೆದುಕೊಳ್ಳುವ ಕಾರಣ ಪ್ರಶಸ್ತಿ ವಿತರಣೆಯ ದಿನಾಂಕವನ್ನು ಸೆ. 25ಕ್ಕೆ ಮುಂದೂಡಲಾಗಿದೆ.
ಆ. 18ರಿಂದ ಸೆ. 2ರ ವರೆಗೆ ಏಶ್ಯನ್ ಗೇಮ್ಸ್ ನಡೆಯಲಿದೆ. ಇಲ್ಲಿನ ಸಾಧಕರನ್ನೂ ಈ ಸಲ ಪ್ರಶಸ್ತಿ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ದೇಶದ ಪ್ರತಿಷ್ಠಿತ ಕ್ರೀಡಾಪ್ರಶಸ್ತಿಗಳಾದ ಖೇಲ್ರತ್ನ, ಅರ್ಜುನ, ದ್ರೋಣಾಚಾರ್ಯ, ಮೇಜರ್ ಧ್ಯಾನ್ಚಂದ್ ಪ್ರಶಸ್ತಿಗಳನ್ನು ನೀಡುವಾಗ ಏಶ್ಯನ್ ಗೇಮ್ಸ್ ಸಾಧನೆ ಪರಿಗಣಿಸ ಲಾಗುತ್ತದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಆದ್ದರಿಂದ ಇದೇ ಮೊದಲ ಬಾರಿಗೆ ಸಂಪ್ರದಾಯ ಮುರಿಯಲಾಗಿದೆ.
2016ರಲ್ಲಿ ರಾಷ್ಟ್ರೀಯ ಕ್ರೀಡಾಪ್ರಶಸ್ತಿ ನೀಡುವಾಗ ಒಲಿಂಪಿಕ್ಸ್ ಎದುರಾಗಿತ್ತು. ಕಡೆಯ ಹಂತದಲ್ಲಿ ಒಲಿಂಪಿಕ್ಸ್ ಪದಕ ವಿಜೇತರು ಸೇರಿದಂತೆ ನಾಲ್ವರಿಗೆ ಖೇಲ್ರತ್ನ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಕ್ರೀಡಾ ಇಲಾಖೆ ತೆಗೆದುಕೊಂಡಿತ್ತು. ಈ ಬಾರಿ ಅಂತಹ ಗೊಂದಲ ಎದುರಾಗದಂತೆ ಕೇಂದ್ರ ಮುನ್ನೆಚ್ಚರಿಕೆ ವಹಿಸಿದೆ.