ಆಸೀಸ್ ಕ್ರಿಕೆಟಿಗರ ಬಸ್ಗೆ ಕಲ್ಲು
Team Udayavani, Sep 6, 2017, 8:43 AM IST
ಢಾಕಾ: ಬಾಂಗ್ಲಾದೇಶ ವಿರುದ್ಧದ ಚಿತ್ತಗಾಂತ್ ಟೆಸ್ಟ್ ಪಂದ್ಯದ ಮೊದಲ ದಿನದಾಟವನ್ನು ಮುಗಿಸಿ ವಾಪಸಾಗುವ ವೇಳೆ ಆಸ್ಟ್ರೇಲಿಯ ಕ್ರಿಕೆಟಿಗರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಕಲ್ಲೇಟು ಬಿದ್ದಿದೆ. ಇದರಿಂದ ಕಿಟಕಿಯ ಗಾಜೊಂದು ಪುಡಿಯಾಗಿದ್ದು, ಆಟಗಾರರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಭದ್ರತಾ ಮ್ಯಾನೇಜರ್ ಸೀನ್ ಕರೋಲ್ ಹೇಳಿದ್ದಾರೆ.
ಈ ಘಟನೆಯ ಬಳಿಕ ಆಸ್ಟ್ರೇಲಿಯ ಕ್ರಿಕೆಟಿಗರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಮುಂದುವರಿದಿದೆ.
“ಇದು ಉದ್ದೇಶಪೂರ್ವಕ ಘಟನೆಯಲ್ಲ. ಕಾಮಗಾರಿ ಪ್ರಗತಿಯಲ್ಲಿದ್ದ ರಸ್ತೆಯಲ್ಲಿ ತಂಡದ ಬಸ್ ಸಾಗುತ್ತಿದ್ದಾಗ, ಮುಂದೆ ಹೋಗುತ್ತಿದ್ದ ಸೆಕ್ಯುರಿಟಿ ಕಾರಿನ ಚಕ್ರಕ್ಕೆ ಸಿಲುಕಿದ ಸಣ್ಣ ಕಲ್ಲೊಂದು ಬಸ್ಸಿಗೆ ಬಡಿದಿದೆ…’ ಎಂಬುದಾಗಿ ಚಿತ್ತಗಾಂಗ್ ಪೊಲೀಸ್ ಕಮಿಷನರ್ ಇಕ್ಬಾಲ್ ಬಾಹರ್ ತಿಳಿಸಿದ್ದಾರೆ. ಮಂಗಳವಾರದಿಂದ ಬಸ್ಸಿನ ಮಾರ್ಗವನ್ನು ಬದಲಿಸಲಾಗಿದೆ.