ಆಜಾದಿ ಕಾ ಅಮೃತ್ ಮಹೋತ್ಸವ್: ಆ. 22: ಒಂದು ದಿನದ ಕ್ರಿಕೆಟ್ ಸಂಭ್ರಮ
Team Udayavani, Jul 10, 2022, 11:42 PM IST
ಹೊಸದಿಲ್ಲಿ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮವನ್ನು ಆಚರಿಸಲು ಬಿಸಿಸಿಐ ಕೂಡ ಮುಂದಾಗಿದೆ.
ಆ. 22ರಂದು ಭಾರತ ಇಲೆವೆನ್ ಮತ್ತು ವಿಶ್ವ ಇಲೆವೆನ್ ತಂಡಗಳ ನಡುವೆ ಕ್ರಿಕೆಟ್ ಪಂದ್ಯವೊಂದನ್ನು ಆಯೋಜಿಸಲು ನಿರ್ಧರಿಸಿದೆ.
ಕೇಂದ್ರ ಕಲೆ ಮತ್ತು ಸಂಸ್ಕೃತಿ ಸಚಿವಾಲಯ ಹಾಗೂ ಬಿಸಿಸಿಐ ನಡುವೆ ಇದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ ಎಂಬುದಾಗಿ ಮಂಡಳಿಯ ಮೂಲವೊಂದು ತಿಳಿಸಿದೆ.ಎಲ್ಲವೂ ಅಂತಿಮಗೊಂಡರೆ ಹೊಸದಿಲ್ಲಿಯಲ್ಲಿ ಈ ಪಂದ್ಯ ನಡೆಯುವ ಸಾಧ್ಯತೆ ಇದೆ.
“ಆ. 22ರಂದು ಭಾರತ ಇಲೆವೆನ್ ಮತ್ತು ವಿಶ್ವ ಇಲೆವೆನ್ ನಡುವೆ ಕ್ರಿಕೆಟ್ ಪಂದ್ಯವೊಂದನ್ನು ನಡೆಸುವಂತೆ ಸರಕಾರದಿಂದ ನಮ್ಮ ಮುಂದೆ ಪ್ರಸ್ತಾವವೊಂದು ಬಂದಿದೆ. ವಿಶ್ವ ಇಲೆವೆನ್ಗಾಗಿ ಕನಿಷ್ಠ 13-14 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟಿಗರ ಅಗತ್ಯವಿದೆ. ವಿದೇಶಿ ಕ್ರಿಕೆಟಿಗರು ಲಭಿಸಿದರೆ ಈ ಪಂದ್ಯ ಸಾಧ್ಯ’ ಎಂದು ಮಂಡಳಿಯ ಮೂಲ ತಿಳಿಸಿದೆ.
ವಿದೇಶಿ ಆಟಗಾರರ ಲಭ್ಯತೆ
ಆಗಸ್ಟ್ನಲ್ಲಿ ಇಂಗ್ಲಿಷ್ ದೇಶಿ ಕ್ರಿಕೆಟ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಮೊದಲಾದ ಸರಣಿ ನಡೆಯುವುದರಿಂದ ವಿದೇಶಿ ಆಟಗಾರರ ಲಭ್ಯತೆ ಸುಲಭವಲ್ಲ ಎಂಬುದೊಂದು ಅನಿಸಿಕೆ.
ಭಾರತದ ತಂಡಕ್ಕೇನೂ ಸಮಸ್ಯೆ ಇರದು. ಆ. 20ಕ್ಕೆ ಜಿಂಬಾಬ್ವೆ ಎದುರಿನ ಸರಣಿ ಮುಗಿಯುವುದರಿಂದ ಹಾಗೂ ಆ. 27ಕ್ಕೆ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಕ್ರಿಕೆಟ್ ಆರಂಭವಾಗುವುದರಿಂದ ಪೂರ್ಣ ಸಾಮರ್ಥ್ಯದ ತಂಡವನ್ನೇ ಕಣ ಕ್ಕಿಳಿಸಬಹುದಾಗಿದೆ. ಅಲ್ಲದೇ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಮೊದಲಾದವರು ಜಿಂಬಾಬ್ವೆ ವಿರುದ್ಧ ಆಡುತ್ತಿಲ್ಲ. ಆದರೆ ವಿಶ್ವದ ಸ್ಟಾರ್ ಆಟಗಾರರು ಲಭ್ಯರಾದರಷ್ಟೇ ಈ ಪಂದ್ಯ ಫುಲ್ ಜೋಶ್ ಹೊಂದಿರಲಿದೆ.