ವಿಂಡೀಸ್ ಕ್ರಿಕೆಟಿಗರ ಬೆಂಬಲಕ್ಕೆ ನಿಂತಿತ್ತು ಬಿಸಿಸಿಐ!
Team Udayavani, Nov 18, 2018, 6:55 AM IST
ಹೊಸದಿಲ್ಲಿ: ವೆಸ್ಟ್ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಡ್ವೇನ್ ಬ್ರಾವೊ 2014ರ ಭಾರತ ಪ್ರವಾಸದ ವೇಳೆ ನಡೆದ ಹಲವು ವಿವಾದಾತ್ಮಕ ಸಂಗತಿಗಳ ಹಿಂದಿನ ವಿದ್ಯಮಾನಗಳನ್ನು ಬಹಿರಂಗಪಡಿಸಿದ್ದಾರೆ.
ವಿಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧದ ಆಕ್ರೋಶದಿಂದ ಆಟಗಾರರು ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿದ್ದರು. ಪಂದ್ಯದ ಮುಂಜಾನೆ 3 ಗಂಟೆಗೆ ಆಗಿನ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್, ಬ್ರಾವೊಗೆ ಸಂದೇಶ ಕಳುಹಿಸಿ “ದಯವಿಟ್ಟು ಮೈದಾನಕ್ಕಿಳಿಯಿರಿ’ ಎಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ವಿಂಡೀಸ್ ಆಟಗಾರರು ಮೈದಾನಕ್ಕಿಳಿದಿದ್ದರು ಎಂದು ಬ್ರಾವೊ ಹೇಳಿಕೊಂಡಿದ್ದಾರೆ.
ವಿಂಡೀಸ್ ಮಂಡಳಿ ನೀಡಿದ ಹೊಸ ಗುತ್ತಿಗೆ ಸರಿಯಾಗಿರಲಿಲ್ಲ. ಆದ್ದರಿಂದ ಆಟಗಾರರು ಅದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ವಿಂಡೀಸ್ ಮಂಡಳಿ ವಿರುದ್ಧ ಪ್ರತಿಭಟಿಸಲು ವಿಂಡೀಸ್ ಆಟಗಾರರು ಭಾರತ ವಿರುದ್ಧದ ಏಕದಿನ ಪಂದ್ಯವನ್ನು ಬಹಿಷ್ಕರಿಸುವ ಮಾರ್ಗವನ್ನು ಆಯ್ದುಕೊಂಡಿದ್ದರು. ಇದರಿಂದ ಬಿಸಿಸಿಐಗೆ ಭಾರೀ ನಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಇಂಥದೊಂದು ಮನವಿ ಮಾಡಿಕೊಂಡಿದ್ದರು.
ನಷ್ಟ ಭರ್ತಿಗೆ ಸಿದ್ಧವಿದ್ದ ಬಿಸಿಸಿಐ
“ವಿಂಡೀಸ್ ಆಟಗಾರರಿಗೆ ಆಗುವ ಸಂಪೂರ್ಣ ನಷ್ಟ ಭರ್ತಿ ಮಾಡಿಕೊಡಲು ಆಗ ಬಿಸಿಸಿಐ ಸಿದ್ಧವಿತ್ತು. ಬಿಸಿಸಿಐ ಎಲ್ಲ ರೀತಿಯಿಂದಲೂ ತಂಡದ ನೆರವಿಗೆ ನಿಂತಿತ್ತು. ಆದರೆ ನಮಗೆ ನಮ್ಮ ಮಂಡಳಿ ಸರಿಯಾದ ಗುತ್ತಿಗೆ ಜಾರಿ ಮಾಡುವುದೇ ಉದ್ದೇಶವಾಗಿತ್ತು. ಇದರ ಮಧ್ಯೆಯೇ ನಾವು 4 ಏಕದಿನ ಪಂದ್ಯಗಳನ್ನು ಆಡಿದೆವು. 4ನೇ ಪಂದ್ಯದ ಮಧ್ಯದಲ್ಲೇ ಪ್ರವಾಸದ ಉಳಿದ ಪಂದ್ಯಗಳಿಂದ ಹಿಂದೆ ಸರಿಯುವುದಾಗಿ ವಿಂಡೀಸ್ ಮಂಡಳಿ ಬಿಸಿಸಿಐಗೆ ತಿಳಿಸಿತ್ತು. ನಾವು ಬೇರೆ ದಾರಿಯಿಲ್ಲದೇ ದೇಶಕ್ಕೆ ಹಿಂತಿರುಗಿದೆವು. ನಮ್ಮ ಪರಿಸ್ಥಿತಿಯನ್ನು ಬಿಸಿಸಿಐ ಸಂಪೂರ್ಣ ಅರ್ಥ ಮಾಡಿಕೊಂಡಿತ್ತು’ ಎಂದು ಬ್ರಾವೊ ಹೇಳಿದ್ದಾರೆ.