ಶ್ರೀನಗರದಲ್ಲಿ ಐ ಲೀಗ್ ಫುಟ್ಬಾಲ್ ಆಡಲು ಸಿದ್ಧ: ಬೆಂಗಳೂರು ಎಫ್ಸಿ
Team Udayavani, Feb 20, 2019, 5:27 AM IST
ಬೆಂಗಳೂರು: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ 40 ಸೈನಿಕರು ಮೃತಪಟ್ಟ ಬಳಿಕ ಅಲ್ಲಿ ಫುಟ್ಬಾಲ್ ಪಂದ್ಯವನ್ನು ಆಡಲು ಮಿನರ್ವ ಪಂಜಾಬ್ ತಂಡ ನಿರಾಕರಿಸಿತ್ತು. ರಿಯಲ್ ಕಾಶ್ಮೀರ ತಂಡದ ವಿರುದ್ಧದ ಈ ಪಂದ್ಯವನ್ನು ಬೇರೆ ಕಡೆಗೆ ವರ್ಗಾಯಿಸಿ ಎಂದು ಮಿನರ್ವ ಪಂಜಾಬ್ ಸಂಘಟಕ ಎಐಎಫ್ಎಫ್ (ಅಖೀಲ ಭಾರತೀಯ ಫುಟ್ಬಾಲ್ ಸಂಸ್ಥೆ)ಗೆ ಮನವಿ ಮಾಡಿತ್ತು.
ಆದರೆ ಖ್ಯಾತ ಫುಟ್ಬಾಲರ್, ಭಾರತ ತಂಡದ ನಾಯಕ ಸುನಿಲ್ ಚೆತ್ರಿ ನೇತೃತ್ವದ ಬೆಂಗಳೂರು ಎಫ್ಸಿ ತಂಡ ಕೂಟಕ್ಕೆ ತೆರಳಲು ಸಿದ್ಧ ಎಂದಿದೆ. ಈ ಬಗ್ಗೆ ತಂಡದ ಮಾಲಕ ಪಾರ್ಥ ಜಿಂದಾಲ್ ಟ್ವಿಟರ್ನಲ್ಲಿ ತಿಳಿಸಿದ್ದು ಇಷ್ಟು. “ಡಿಯರ್, ರಿಯಲ್ ಕಾಶ್ಮೀರ ಎಫ್ಸಿ, ನಾವು ನಿಮ್ಮ ಸುಂದರ ತಾಣಕ್ಕೆ ಬಂದು ಪಂದ್ಯದಲ್ಲಿ ಭಾಗವಹಿಸಲು ಸಿದ್ಧರಿದ್ದೇವೆ. ಶ್ರೀನಗರ ನಮ್ಮ ದೇಶದ ಅವಿಭಾಜ್ಯ ಅಂಗ. ಅಲ್ಲಿ ಆಡುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.