ಸಿಎಸ್ ಕೆ ನನ್ನ ಬದಲು ಧೋನಿಯನ್ನು ಆಯ್ಕೆ ಮಾಡಿದ್ದು ಬೇಸರವಾಗಿತ್ತು: ದಿನೇಶ್ ಕಾರ್ತಿಕ್
Team Udayavani, Apr 24, 2020, 5:12 PM IST
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ತವರಿನ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಹರಾಜು ಪ್ರಕ್ರಿಯೆಯಿಂದ ತನ್ನನ್ನು ಕೈಬಿಟ್ಟದ್ದು ನೋವು ತಂದಿತ್ತು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ದಿನೇಶ್ ಕಾರ್ತಿಕ್ ನೋವನ್ನು ಹೊರಹಾಕಿದ್ದಾರೆ. “2008ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಐಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ನಾನು ಭಾಗಿಯಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ನನ್ನನ್ನು ಆಯ್ಕೆ ಮಾಡುವುದರ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದೆ. ನನ್ನನ್ನು ನಾಯಕನನ್ನಾಗಿ ಮಾಡುತ್ತಾರೋ ಇಲ್ಲವೋ ಅದು ಪ್ರಶ್ನೆಯಾಗಿರಲಿಲ್ಲ.
ಆದರೆ ಮೊದಲ ಆಟಗಾರನನ್ನಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಚೆನ್ನೈ ತಂಡ 11.39 ಕೋಟಿ ರೂ. ಗೆ ಖರೀದಿಸಿತ್ತು. ಧೋನಿ ನನ್ನ ಜತೆಯಲ್ಲೇ ಕುಳಿತಿದ್ದರು. ಆದರೆ ಅವರು ತಮ್ಮನ್ನು ಚೆನ್ನೈ ತಂಡಕ್ಕೆ ಆಯ್ಕೆ ಮಾಡುವ ವಿಷಯವನ್ನು ಹಂಚಿಕೊಂಡಿರಲಿಲ್ಲ. ಬಹುಶಃ ಅವರಿಗೂ ಗೊತ್ತಿರಲಿಲ್ಲ ಎಂದೆನಿಸುತ್ತದೆ. ಆದರೆ ಆ ಘಟನೆಯಿಂದ ಮಾತ್ರ ನನಗೆ ಹೃದಯಕ್ಕೆ ಇರಿದಂತಾಯಿತು’ ಎಂದಿದ್ದಾರೆ.