ಯುವ ಪ್ರತಿಭೆಗಳಿಗೆ ಅವಕಾಶ ನೀಡಿ: ಕಪಿಲ್ದೇವ್
Team Udayavani, Nov 4, 2021, 6:42 AM IST
ನವದೆಹಲಿ: ಹಿರಿಯ ಆಟಗಾರರ ಬದಲು ಯುವ ಕ್ರಿಕೆಟ್ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಬೇಕೆಂದು ಭಾರತ ತಂಡದ ಮಾಜಿ ನಾಯಕ ಕಪಿಲ್ದೇವ್ ಸಲಹೆ ನೀಡಿದ್ದಾರೆ.
ನೀವು ವಿಶ್ವಕಪ್ ಗೆಲ್ಲಬೇಕೆಂದರೆ ಅಥವಾ ಸೆಮಿಫೈನಲ್ ತಲುಪಬೇಕೆಂದರೆ ನಿಮ್ಮ ಸ್ವಂತ ಸಾಮರ್ಥ್ಯದ ಮೂಲಕ ಬನ್ನಿ. ಬೇರೆ ತಂಡಗಳ ಫಲಿತಾಂಶವನ್ನು ಅವಲಂಬಿಸುವ ಮೂಲಕ ಮುನ್ನಡೆಯನ್ನು ನಿರೀಕ್ಷಿಸುವುದು ಶೋಭೆಯಲ್ಲ. ದೊಡ್ಡ ದಾಖಲೆಗಳನ್ನು ಹೊಂದಿದ ಆಟಗಾರರು ತಂಡದಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವಾಗ ಅವರನ್ನು ಕೈಬಿಟ್ಟು ಹೊಸ ಆಟಗಾರರಿಗೆ ಅವಕಾಶ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಭವಿಷ್ಯದ ದೊಡ್ಡ ಆಟಗಾರರ ಬಗ್ಗೆ ಆಯ್ಕೆದಾರರು ನಿರ್ಧರಿಸುವ ಸಮಯ ಬಂದಿದೆ ಎಂದು ಕಪಿಲ್ದೇವ್ ಹೇಳಿದರು.
ಇದನ್ನೂ ಓದಿ:ಭಾರತೀಯ ಬಾಲಕಿಯ ಭಾಷಣಕ್ಕೆ ಮೆಚ್ಚುಗೆ
ಚಿಂತಿಸುವ ಸಮಯ ಇದು: ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಯುವ ಆಟಗಾರರ ಬಗ್ಗೆ ಚಿಂತಿಸುವ ಸಮಯ ಇದು. ಒಂದು ವೇಳೆ ಯುವ ಆಟಗಾರರು ವಿಫಲರಾದರೂ ಅವರಿಗೆ ಉತ್ತಮ ಅನುಭವವಾಗುತ್ತದೆ. ಆದರೆ ಅನುಭವಿ ಆಟಗಾರರು ಉತ್ತಮ ಪ್ರದರ್ಶನ ತೋರದೇ ಇದ್ದಲ್ಲಿ ಟೀಕೆಗಳಿಗೆ ಗುರಿಯಾಗುತ್ತಾರೆ. ಹಾಗಾಗಿ ಬಿಸಿಸಿಐ ಯುವ ಆಟಗಾರರನ್ನು ಸೇರಿಸಲು ಮುಂದಾಗಬೇಕು ಎಂದು ಕಪಿಲ್ ಸಲಹೆ ನೀಡಿದರು.