ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತ,ಆಸಿಸ್ಗೆ ಅವಕಾಶ ಹೆಚ್ಚು;ಪ್ರಸನ್ನ
Team Udayavani, May 26, 2017, 10:50 AM IST
ಬೆಂಗಳೂರು: ಮುಂಬರುವ ಐಸಿಸಿ ಚಾಂಪಿ ಯನ್ಸ್ ಟ್ರೋಫಿ ಪಂದ್ಯಾವಳಿ ಯಲ್ಲಿ ಹಾಲಿ ಚಾಂಪಿಯನ್ ಭಾರತ ಮತ್ತು ವಿಶ್ವ ಚಾಂಪಿ ಯನ್ ಆಸ್ಟ್ರೇಲಿಯ ತಂಡಗಳು ಫೇವರಿಟ್ ಆಗಿವೆ ಎಂಬುದಾಗಿ ಸ್ಪಿನ್ ಮಾಂತ್ರಿಕ ಇ.ಎ.ಎಸ್. ಪ್ರಸನ್ನ ಅಭಿಪ್ರಾಯ ಪಟ್ಟಿದ್ದಾರೆ.
“ಕಾಗದದಲ್ಲಿ ಎರಡೂ ತಂಡಗಳು ಬಲಿಷ್ಠ ಹಾಗೂ ಸಮಾನ ಸಾಮರ್ಥ್ಯ ಹೊಂದಿರುವುದು ಗೋಚರಕ್ಕೆ ಬರುತ್ತದೆ. ಇವರೆಡೂ ಕೂಟದ ನೆಚ್ಚಿನ ತಂಡಗಳು. ಗೆದ್ದರೆ ಆಶ್ಚರ್ಯವೇನಿಲ್ಲ, ಅಕಸ್ಮಾತ್ ಈ ತಂಡಗಳು ಫೈನಲ್ ಪ್ರವೇಶಿಸದೆ ಹೋದರೆ ಆದೇ ದೊಡ್ಡ ಅಚ್ಚರಿ ಎನಿಸುತ್ತದೆ…’ ಎಂದು ಪ್ರಸನ್ನ ಹೇಳಿದರು.
“ಉಳಿದ ತಂಡಗಳಿಗೆ ಹೋಲಿಸಿದರೆ ಭಾರತ, ಆಸ್ಟ್ರೇಲಿಯದ ಬೌಲಿಂಗ್ ಸಾಮರ್ಥ್ಯ ಹೆಚ್ಚು. ಭಾರತ 6 ಮಂದಿ ಸ್ಪೆಷಲಿಸ್ಟ್ ಬೌಲರ್ಗಳ ಪಡೆಯನ್ನೇ ಹೊಂದಿದೆ. ಇಂಗ್ಲೆಂಡ್ ವಾತಾವರಣ ಹಾಗೂ ಪಿಚ್ಗಳು ಸೀಮ್ ಬೌಲರ್ಗಳಿಗೆ ಭಾರೀ ನೆರವು ನೀಡುತ್ತವೆ. ಹೀಗಾಗಿ ಭಾರತ ಹೆಚ್ಚುವರಿ ಸೀಮ್ ಬೌಲರ್ ಒಬ್ಬನನ್ನು ಆಡಿಸುವುದು ಸೂಕ್ತ. ಹಾಗೆಯೇ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಬೇಕಿತ್ತು…’ ಎಂದರು.
“ಇದು 50 ಓವರ್ಗಳ ಪಂದ್ಯ. ಇಲ್ಲಿ ಸ್ಪಿನ್ನರ್ಗಳ 20 ಓವರ್ಗಳೂ ಮಹತ್ವದ ಪಾತ್ರ ವಹಿಸಲಿವೆ. ರನ್ ಹರಿವನ್ನು ತಡೆಯುವುದರ ಜತೆಗೆ ನಡು ಹಂತದಲ್ಲಿ ವಿಕೆಟ್ ಕೀಳಲು ಸ್ಪಿನ್ನರ್ಗಳ ಸೇವೆ ಅಗತ್ಯ. ನಾವು ಹಾಲಿ ಚಾಂಪಿಯನ್ ಕೂಡ ಹೌದು. ಕಳೆದ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿದ್ದ 9 ಮಂದಿ ಆಟಗಾರರು ಈಗಿನ ತಂಡದಲ್ಲಿದ್ದಾರೆ. ಇದರಿಂದ ಭಾರತಕ್ಕೆ ಹೆಚ್ಚಿನ ನೆರವು ಲಭಿಸಬಲ್ಲದು…’ ಎಂಬುದಾಗಿ ಸ್ಪಿನ್ ಲೆಜೆಂಡ್ ಪ್ರಸನ್ನ ಅಭಿಪ್ರಾಯಪಟ್ಟರು.