ವನಿತಾ ವಿಶ್ವಕಪ್ ಕ್ರಿಕೆಟ್: ಅಜೇಯ ಆಸೀಸ್ ವಿರುದ್ಧ ಅಸ್ಥಿರ ಭಾರತ
Team Udayavani, Mar 19, 2022, 5:00 AM IST
ಆಕ್ಲೆಂಡ್: ವನಿತಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಶನಿವಾರ “ಬಿಗ್ ಮ್ಯಾಚ್’ ಒಂದನ್ನು ಆಡಲಿದೆ. ಈವರೆಗಿನ ನಾಲ್ಕೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಾತ್ರಿಗೊಳಿಸಿರುವ ಆಸ್ಟ್ರೇಲಿಯವನ್ನು ಆಕ್ಲೆಂಡ್ನಲ್ಲಿ ಎದುರಿಸಲಿದೆ.
ವಿಶ್ವಕಪ್ಗೆ ಒಂದು ತಿಂಗಳಿರುವಾಗಲೇ ನ್ಯೂಜಿಲ್ಯಾಂಡಿಗೆ ಆಗಮಿಸಿರುವ ಭಾರತ ಈವರೆಗೆ ನೆಚ್ಚಿನ ತಂಡವಾಗೇನೂ ಗುರು ತಿಸಿಕೊಂಡಿಲ್ಲ. ಅಸ್ಥಿರ ಪ್ರದರ್ಶನವೇ ಮಿಥಾಲಿ ಪಡೆಯ “ಸಾಧನೆ’ಯಾಗಿದೆ. ಮೊದಲ ಪಂದ್ಯದಲ್ಲಿ ದುರ್ಬಲ ಪಾಕಿ ಸ್ಥಾನವನ್ನು 107 ರನ್ನುಗಳಿಂದ ಮಣಿಸಿ ಶುಭಾರಂಭವನ್ನೇನೋ ಮಾಡಿತು. ಬಳಿಕ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ 62 ರನ್ನುಗಳಿಂದ ಎಡವಿತು.
ಎಲ್ಲ ದಿಕ್ಕುಗಳಿಂದ ಹರಿದು ಬಂದ ಟೀಕೆಗಳ ಬೆನ್ನಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ವಿಶ್ವಕಪ್ನಲ್ಲೇ ಸರ್ವಾಧಿಕ ಮೊತ್ತ ಪೇರಿಸಿ ಜಯಭೇರಿ ಮೊಳಗಿಸಿತು. ಸ್ಮತಿ ಮಂಧನಾ ಮತ್ತು ಹರ್ಮನ್ಪ್ರೀತ್ ಕೌರ್ ಸೆಂಚುರಿ ಬಾರಿಸಿ ಮೆರೆದಾಡಿದರು. ಇಂಗ್ಲೆಂಡನ್ನು ಮಣಿಸಲು ಈ ಸ್ಫೂರ್ತಿ ಧಾರಾಳ ಸಾಕು ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಇದ್ದರು. ಆದರೆ ಭಾರತಕ್ಕೆ ಬ್ಯಾಟಿಂಗ್ ಕೈಕೊಟ್ಟಿತು. 134ಕ್ಕೆ ಕುಸಿದು ಹಾಲಿ ಚಾಂಪಿಯನ್ ಇಂಗ್ಲೆಂಡಿಗೆ ಅಂಕದ ಖಾತೆ ತೆರೆಯಲು ನೆರವಾಯಿತು.
ಇನ್ನೀಗ ಬಲಿಷ್ಠ ಆಸ್ಟ್ರೇಲಿಯದ ಸರದಿ. ಮೆಗ್ ಲ್ಯಾನಿಂಗ್ ಬಳಗ ಇಂಗ್ಲೆಂಡನ್ನು ಮಣಿಸುವ ಮೂಲಕ ಅಭಿಯಾನ ಆರಂಭಿಸಿತು. ಮುನ್ನೂರರ ಗಡಿ ದಾಟಿ ದರೂ ಗೆಲುವಿನ ಅಂತರ 12 ರನ್ ಮಾತ್ರ. ಬಳಿಕ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸನ್ನು 7 ವಿಕೆಟ್ಗಳಿಂದ ಕೆಡವಿತು. ಈ ನಡುವೆ ನ್ಯೂಜಿಲ್ಯಾಂಡಿಗೆ 141 ರನ್ನುಗಳ ಸೋಲಿನೇಟು ನೀಡಿತು.
ಏನೂ ಸಂಭವಿಸಬಹುದು! :
ಗೆಲುವಿನ ಪ್ರಚಂಡ ಓಟದಲ್ಲಿ ತೊಡ ಗಿರುವ ಕಾಂಗರೂ ಪಡೆಯನ್ನು ಹಿಡಿದು ನಿಲ್ಲಿಸಲು ಭಾರತದಿಂದ ಸಾಧ್ಯವೇ ಎಂಬು ದೊಂದು ಪ್ರಶ್ನೆ. “ಈಗಿನ ಸ್ಥಿತಿಯಲ್ಲಿ ಕಷ್ಟ’ ಎಂಬುದೇ ಎಲ್ಲ ಕಡೆಯಿಂದ ಬರುವ ಉತ್ತರ. ಆದರೆ ಕ್ರಿಕೆಟ್ನಲ್ಲಿ ಏನೂ ಸಂಭ ವಿಸಬಹುದು. ಕಳೆದ ವರ್ಷ ಆಸ್ಟ್ರೇ ಲಿಯದ 26 ಪಂದ್ಯಗಳ ಗೆಲುವಿನ ಸರಪಳಿ ಯನ್ನು ತುಂಡರಿಸಿದ್ದೇ ಭಾರತ ಎಂಬು ದನ್ನು ಮರೆಯುವಂತಿಲ್ಲ. ವಿಶ್ವಕಪ್ನಲ್ಲೂ ಇದು ಸಾಧ್ಯವಾಗದೇ? ನಿರೀಕ್ಷೆ ಸಹಜ.
2017ರ ವಿಶ್ವಕಪ್ನಿಂದ ಆಸ್ಟ್ರೇಲಿಯ ವನ್ನು ಹೊರದಬ್ಬಿದ್ದೇ ಭಾರತ ಎಂಬು ದನ್ನೂ ನೆನಪಿಸಿಕೊಳ್ಳಬೇಕಿದೆ. ಕೌರ್ ಅಜೇಯ 171 ರನ್ ಪೇರಿಸಿ ಕಾಂಗರೂ ಗಳನ್ನು ಕಾಡಿದ್ದರು. ಭಾರತ ಈ ಪಂದ್ಯ ವನ್ನು 36 ರನ್ನುಗಳಿಂದ ಜಯಿಸಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಯೋಜನೆ ಆಸ್ಟ್ರೇ ಲಿಯದ್ದು ಎಂಬುದು ಭಾರತೀಯರ ಮನದಲ್ಲಿರಬೇಕು.
ಬ್ಯಾಟಿಂಗ್ ಕ್ಲಿಕ್ ಆಗಬೇಕಿದೆ :
ಆಸೀಸ್ ದಾಳಿಯನ್ನು ಎದುರಿಸಿ ನಿಂತು ಬ್ಯಾಟಿಂಗ್ನಲ್ಲಿ ಯಶಸ್ಸು ಕಂಡರೆ ಭಾರತ ಅರ್ಧ ಯಶಸ್ಸು ಕಂಡಂತೆ. ಮಂಧನಾ, ಯಾಸ್ತಿಕಾ, ಮಿಥಾಲಿ, ದೀಪ್ತಿ, ಕೌರ್, ರಿಚಾ ಅವರೆಲ್ಲ ಕ್ರೀಸ್ ಆಕ್ರಮಿಸಿಕೊಂಡು ಹೆಚ್ಚು ಜವಾಬ್ದಾರಿಯುತವಾಗಿ ಆಡಬೇಕಾದ ಅಗತ್ಯವಿದೆ. ಹಾಗೆಯೇ ಬೌಲಿಂಗ್ ಕೂಡ ಹೆಚ್ಚು ಘಾತವಾಗಿ ಪರಿಣಮಿಸಬೇಕಿದೆ. ಇಂಗ್ಲೆಂಡ್ ವಿರುದ್ಧ ಭಾರತ ಅಲ್ಪ ಮೊತ್ತ ಗಳಿಸಿದರೂ ಬೌಲರ್ಗಳು ತಿರುಗಿ ಬಿದ್ದು 6 ವಿಕೆಟ್ ಉಡಾಯಿಸಿದ್ದನ್ನು ಮರೆ ಯುವಂತಿಲ್ಲ.
ಅಪಾಯಕಾರಿ ರಶೆಲ್ ಹೇನ್ಸ್ :
ಇನ್ಫಾರ್ಮ್ ಓಪನರ್ ರಶೆಲ್ ಹೇನ್ಸ್ ಭಾರತಕ್ಕೆ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹೇನ್ಸ್ ಈಗಾಗಲೇ 92ರಷ್ಟು ಉತ್ಕೃಷ್ಟ ಸರಾಸರಿಯಲ್ಲಿ 277 ರನ್ ಪೇರಿಸಿದ್ದಾರೆ. ಎಲ್ಲಿಸ್ ಪೆರ್ರಿ ಅಮೋಘ ಆಲ್ರೌಂಡ್ ಪ್ರದರ್ಶನ ನೀಡುತ್ತ ಬಂದಿದ್ದಾರೆ.
ಭಾರತ ಸೆಮಿಫೈನಲ್ ಪ್ರವೇಶಿಸಬೇಕಾ ದರೆ ಉಳಿದ ಮೂರರಲ್ಲಿ 2 ಪಂದ್ಯಗಳನ್ನು ಗೆಲ್ಲಬೇಕಾದುದು ಅನಿವಾರ್ಯ ಎಂಬುದು ಸದ್ಯದ ಲೆಕ್ಕಾಚಾರ.
ಜೂಲನ್ ಗೋಸ್ವಾಮಿ 200 ಪಂದ್ಯ :
200ನೇ ಪಂದ್ಯ ಆಡಲಿಳಿಯುವ ಜೂಲನ್ ಗೋಸ್ವಾಮಿ ಅರ್ಲಿ ಬ್ರೇಕ್ ಒದಗಿಸಿ ಈ ಗಳಿಗೆಯನ್ನು ಸ್ಮರಣೀಯಗೊಳಿಸಬೇಕಿದೆ. ಇವರ ಜತೆಗಾರ್ತಿ ಮೇಘನಾ ಸಿಂಗ್, ಪೂಜಾ ವಸ್ತ್ರಾಕರ್, ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್, ಸ್ನೇಹ್ ರಾಣಾ, ದೀಪ್ತಿ ಶರ್ಮ ಬೌಲಿಂಗ್ ಮ್ಯಾಜಿಕ್ ಮಾಡಿದರೆ ಪಂದ್ಯ ಹೆಚ್ಚು ರೋಚಕಗೊಳ್ಳಲಿದೆ.
ಜೂಲನ್ 200 ಏಕದಿನ ಪಂದ್ಯವಾಡಿದ ವಿಶ್ವದ ಕೇವಲ 2ನೇ ಆಟಗಾರ್ತಿ ಎನಿಸಲಿದ್ದಾರೆ. ಮಿಥಾಲಿ ರಾಜ್ 229 ಪಂದ್ಯಗಳನ್ನಾಡಿ ಅಗ್ರಸ್ಥಾನಿಯಾಗಿದ್ದಾರೆ.
ಇಂದಿನ ಪಂದ್ಯ :
ಭಾರತ-ಆಸ್ಟ್ರೇಲಿಯ
ಸ್ಥಳ: ಆಕ್ಲೆಂಡ್
ಆರಂಭ: ಬೆಳಗ್ಗೆ 6.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್