ಭಾರತಕ್ಕೆ ಪ್ರಮುಖ ಕೂಟಗಳ ಆತಿಥ್ಯವಿಲ್ಲ: ಐಒಸಿ
Team Udayavani, Feb 23, 2019, 12:30 AM IST
ಲಾಸಾನ್ನೆ/ಹೊಸದಿಲ್ಲಿ: ಹೊಸ ದಿಲ್ಲಿಯಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಪಾಕಿಸ್ಥಾನ ಶೂಟರ್ಗಳಿಗೆ ಭಾರತ ವೀಸಾ ನಿರಾಕರಿಸಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಭಾರತ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಂಡಿದೆ. ಭಾರತಕ್ಕೆ ಭವಿಷ್ಯದಲ್ಲಿ ಯಾವುದೇ ಪ್ರಮುಖ ಕೂಟಗಳ ಆತಿಥ್ಯ ನೀಡುವುದಿಲ್ಲ. ಅಷ್ಟು ಮಾತ್ರವಲ್ಲ, ಈ ಸಂಬಂಧ ಭಾರತದೊಂದಿಗೆ ಮಾತುಕತೆಯನ್ನೂ ನಡೆಸುವುದಿಲ್ಲವೆಂದು ಐಒಸಿ ಹೇಳಿದೆ.
ಭಾರತ ವೀಸಾ ನಿರಾಕರಿಸಿರುವುದು ಐಒಸಿ ನಿಯಮಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ಭಾರತ ಭವಿಷ್ಯದಲ್ಲಿ ಪ್ರಮುಖ ಕೂಟಗಳ ಆತಿಥ್ಯ ವಹಿಸಲು ಬಯಸಿದಲ್ಲಿ, ಎಲ್ಲ ದೇಶಗಳ ಎಲ್ಲ ಆಟಗಾರರಿಗೂ ಪ್ರವೇಶ ನೀಡುವುದಾಗಿ ಲಿಖೀತ ಭರವಸೆ ನೀಡಬೇಕು ಎಂದು ಐಒಸಿ ಹೇಳಿದೆ. ಇದು ಒಲಿಂಪಿಕ್ಸ್ ಆಯೋಜಿಸುವ ಭಾರತದ ಕನಸಿಗೆ ಅಡ್ಡಿಯಾಗಿದೆ. ಭಾರತ 2026ರ ಯುವ ಒಲಿಂಪಿಕ್ಸ್, 2032ರ ಒಲಿಂಪಿಕ್ಸ್, 2030ರ ಏಶ್ಯನ್ ಗೇಮ್ಸ್ ಆಯೋಜಿಸುವ ಯೋಜನೆ ಹೊಂದಿತ್ತು. ಇದಕ್ಕೆ ವೀಸಾ ನಿರಾಕರಣೆಯ ವಿದ್ಯಮಾನ ಅಡ್ಡಿಯಾಗಿದೆ.
2 ಒಲಿಂಪಿಕ್ಸ್ ಸ್ಥಾನ ರದ್ದು
ಶೂಟಿಂಗ್ ವಿಶ್ವಕಪ್ನ 2 ಒಲಿಂಪಿಕ್ಸ್ ಅರ್ಹತಾ ಸ್ಥಾನಗಳನ್ನು ಐಒಸಿ ರದ್ದುಗೊಳಿಸಿದೆ. ಈ ವಿಶ್ವಕಪ್ ಮೂಲಕ 16 ಶೂಟರ್ಗಳು ಒಲಿಂಪಿಕ್ಸ್ಗೆ ಅರ್ಹತೆ ಗಳಿಸಬಹುದಿತ್ತು. ಈಗ 14ಕ್ಕೆ ಇಳಿ ದಿದೆ. ಪಾಕಿಸ್ಥಾನದ ಇಬ್ಬರು ಶೂಟರ್ಗಳು ಭಾರತಕ್ಕೆ ಬರದಿರುವುದರಿಂದ, ಅವರು ಪಾಲ್ಗೊಳ್ಳಬಯಸಿದ್ದ ರ್ಯಾಪಿಡ್ ಫೈರ್ ವಿಭಾಗದ ಕೋಟಾವನ್ನು ಕೈಬಿಡಲಾಗಿದೆ. ಈ ವಿಭಾಗದಲ್ಲಿ ಸ್ಪರ್ಧಿಸುವ ಭಾರತೀಯರಿಗೂ ಸಮಸ್ಯೆಯಾಗಿದೆ.