ಭಾರತದಲ್ಲೇ ಐಪಿಎಲ್ ನಡೆಸಲು ಮೊದಲ ಪ್ರಾಶಸ್ತ್ಯ: ಅರುಣ್ ಧುಮಾಲ್
Team Udayavani, Jul 7, 2020, 4:57 PM IST
ಮುಂಬೈ: ಕೋವಿಡ್-19 ಸೋಂಕಿನ ಕಾರಣದಿಂದ ಮುಂದೂಡಿಕೆಯಾಗಿದ್ದ ಐಪಿಎಲ್ ನಡೆಸುವ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಭಾರತದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದಂತೆ ಐಪಿಎಲ್ ನಡೆಸುವ ಕಾರ್ಯತಂತ್ರವೂ ವಿಳಂಬವಾಗುತ್ತಿದೆ. ಈ ಮಧ್ಯೆ ಕೋವಿಡ್ ಮುಕ್ತವಾಗಿರುವ ನ್ಯೂಜಿಲ್ಯಾಂಡ್ ಐಪಿಎಲ್ ನಡೆಸಲು ಉತ್ಸುಕತೆ ತೋರಿದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಭಾರತದಲ್ಲೆ ಐಪಿಎಲ್ ನಡೆಸುವುದು ನಮ್ಮ ಮೊದಲ ಆದ್ಯತೆ. ಒಂದು ವೇಳೆ ಸಾಧ್ಯವಾಗಿಲ್ಲವಾದರೆ ನಾವು ಬೇರೆ ದೇಶಗಳತ್ತ ಗಮನಹರಿಸುತ್ತೇವೆ. ನ್ಯೂಜಿಲ್ಯಾಂಡ್ ಕೂಡಾ ಆಸಕ್ತಿ ವಹಿಸಿದೆ. ನಮ್ಮ ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದಿದ್ದಾರೆ.
ಕಳೆದ 12 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಕೇವಲ ಎರಡು ಬಾರಿ ಐಪಿಎಲ್ ದೇಶದಿಂದ ಹೊರಕ್ಕೆ ಸಂಘಟಿಸಲ್ಪಟ್ಟಿದೆ. 2009ರಲ್ಲಿ ಸಾರ್ವತ್ರಿಕ ಚುನಾವಣೆ ಕಾರಣದಿಂದ ಪೂರ್ಣ ಕೂಟ ದಕ್ಷಿಣ ಆಫ್ರಿಕಾದಲ್ಲಿ ನಡೆದರೆ, 2014ರ ಚುನಾವಣಾ ಕಾರಣದಿಂದ ಮೊದಲಾರ್ಧ ದುಬೈನಲ್ಲಿ ನಡೆದಿತ್ತು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ ಅಂತ್ಯಕ್ಕೆ ಐಪಿಎಲ್ ಆರಂಭವಾಗಿ ಮೇ ಅಂತ್ಯಕ್ಕೆ ಮುಗಿಯಬೇಕಿತ್ತು. ಆದರೆ ಕೋವಿಡ್ -19 ಸೋಂಕಿನ ಕಾರಣದಿಂದ ಎಲ್ಲಾ ಯೋಜನೆಗಳು ತಲೆಕೆಳಗಾಗಿದೆ.