ಅಂತಿಮ ಏಕದಿನ: ಟಾಸ್ ಗೆದ್ದ ಭಾರತ, ಇಬ್ಬರು ಆಟಗಾರರು ಪದಾರ್ಪಣೆ
Team Udayavani, Dec 2, 2020, 8:49 AM IST
ಕ್ಯಾನ್ ಬೇರಾ: ಮೊದಲ ಎರಡು ಪಂದ್ಯದಲ್ಲಿ ಸೋಲನುಭವಿಸಿದ ಭಾರತ ತಂಡ ಅಂತಿಮ ಹಣಾಹಣಿಗೆ ಸಜ್ಜಾಗಿದೆ. ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿದ್ದು ನಾಲ್ಕು ಬದಲಾವಣೆ ಮಾಡಿಕೊಂಡಿದ್ದಾರೆ.
ಮೊದಲೆರಡು ಪಂದ್ಯದಲ್ಲಿ ದುಬಾರಿಯಾದ ಚಾಹಲ್ ಮತ್ತು ನವದೀಪ್ ಸೈನಿ, ಮೊಹಮ್ಮದ್ ಶಮಿ ಮತ್ತು ಮಾಯಾಂಕ್ ಅಗರ್ವಾಲ್ ರನ್ನು ಕೈ ಬಿಡಲಾಗಿದೆ. ಐಪಿಎಲ್ ಹೀರೋ ನಟರಾಜನ್ ಇಂದಿನ ಪಂದ್ಯದಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ. ಉಳಿದಂತೆ ಶಾರ್ದುಲ್ ಥಾಕುರ್, ಕುಲದೀಪ್ ಯಾದವ್ ಮತ್ತು ಶುಭ್ಮನ್ ಗಿಲ್ ಇಂದು ಕಣಕ್ಕೆ ಇಳಿಯುತ್ತಿದ್ದಾರೆ.
ಆಸೀಸ್ ಪರ ಕ್ಯಾಮರೂನ್ ಗ್ರೀನ್ ಇಂದು ಪದಾರ್ಪಣೆ ಮಾಡುತ್ತಿದ್ದಾರೆ. ಸೀನ್ ಅಬೋಟ್ ಮತ್ತು ಆಶ್ಟನ್ ಅಗರ್ ಕಣಕ್ಕಿಳಿಯುತ್ತಿದ್ದಾರೆ .
ಕ್ಯಾನ್ಬೆರಾ ಪಂದ್ಯವನ್ನೂ ಕಳೆದು ಕೊಂಡರೆ ಟೀಮ್ ಇಂಡಿಯಾ ಸತತ 2 ಏಕದಿನ ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಸಂಕಟಕ್ಕೆ ತುತ್ತಾದಂತಾಗುತ್ತದೆ. ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡಿಗೆ ಪ್ರವಾಸಗೈದಿದ್ದ ಭಾರತ ಅಲ್ಲಿಯೂ 3-0 ಅಂತರದ ಸೋಲಿಗೆ ಗುರಿಯಾಗಿತ್ತು. ಕ್ಯಾನ್ಬೆರಾದಲ್ಲಿ ಈ ಮುಖಭಂಗ ತಪ್ಪಬೇಕಿದೆ.
ವಾರ್ನರ್, ಕಮಿನ್ಸ್ ಗೈರು
ಆಸ್ಟ್ರೇಲಿಯದ ಇಬ್ಬರು ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್ ಈ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಇದರಿಂದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಆತಿಥೇಯರಿಗೆ ಹಿನ್ನಡೆ ಆಗಲಿದೆ ಎಂಬುದೊಂದು ಲೆಕ್ಕಾಚಾರ. ಆದರೆ ಈಗಾಗಲೇ ಸರಣಿ ಗೆದ್ದಿರುವ ಆಸೀಸ್ ಇಂಥ ಆತಂಕಕ್ಕೆ ಒಳಗಾಗುವ ತಂಡವಲ್ಲ. ಆತಿಥೇಯರ ಬ್ಯಾಟಿಂಗ್ ಲೈನ್ಅಪ್ ಬಲಿಷ್ಠವಾಗಿದೆ. ಸ್ಟೀವನ್ ಸ್ಮಿತ್ ಅವರ ಸಿಡಿಲಬ್ಬರದ ಅವಳಿ ಶತಕ ಕಾಂಗರೂ ಪಾಲಿಗೆ ಬೋನಸ್ ಎಂದೇ ಹೇಳಬೇಕು. ಈ ವಿಕೆಟ್ ಬೇಗ ಉರುಳಿದರೆ ಭಾರತಕ್ಕೆ ಅವಕಾಶ ಹೆಚ್ಚು.