ಅ.ಭಾ. ಅಂತರ್ ವಿ.ವಿ. ವಾಲಿಬಾಲ್: ಕುರುಕ್ಷೇತ್ರ ವಿ.ವಿ. ಚಾಂಪಿಯನ್
Team Udayavani, Jan 8, 2023, 11:03 PM IST
ಉಡುಪಿ : ಮಂಗಳೂರು ವಿ.ವಿ. ಮತ್ತು ಪೂರ್ಣಪ್ರಜ್ಞ ಕಾಲೇಜಿನ ಜಂಟಿ ಆಶ್ರಯದಲ್ಲಿ ಉಡುಪಿಯಲ್ಲಿ ನಡೆದ ಅಖೀಲ ಭಾರತ ಅಂತರ್ ವಿ.ವಿ. ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುರುಕ್ಷೇತ್ರ ವಿ.ವಿ. ತಂಡ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಫೈನಲ್ನಲ್ಲಿ ಕುರುಕ್ಷೇತ್ರ ವಿ.ವಿ. ತಂಡ ಚೆನ್ನೈನ ಎಸ್ಆರ್ಎಂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ತಂಡವನ್ನು 3-0 ಅಂತರದಿಂದ ಬಗ್ಗುಬಡಿಯಿತು.
ರವಿವಾರ ರಾತ್ರಿ ನಡೆದ ಫೈನಲ್ನಲ್ಲಿ ಏಕಪಕ್ಷೀಯವಾಗಿ ಸಾಗಿತು. ಕುರುಕ್ಷೇತ್ರ ವಿ.ವಿ. ತಂಡ 25-20, 25-16, 25-18 ನೇರ ಸೆಟ್ಗಳ ಜಯ ಸಾಧಿಸಿತು.
ಕ್ಯಾಲಿಕಟ್ ವಿ.ವಿ.ಗೆ
3ನೇ ಸ್ಥಾನ
ಮೊದಲ ಸೆಮಿಫೈನಲ್ಲಿ ಕುರುಕ್ಷೇತ್ರ ವಿ.ವಿ. ತಂಡ ಕ್ಯಾಲಿಕಟ್ ವಿ.ವಿ. ವಿರುದ್ಧ 3-2 ಸೆಟ್ಗಳಿಂದ ಜಯ ಸಾಧಿಸಿದರೆ, ಚೆನ್ನೈನ ಎಸ್ಆರ್ಎಂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ತಂಡ ಮಂಗಳೂರು ವಿ.ವಿ. ವಿರುದ್ಧ 3-0 ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು. ಮೂರನೇ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಕ್ಯಾಲಿಕಟ್ ವಿ.ವಿ. ತಂಡ ಮಂಗಳೂರು ವಿ.ವಿ. ತಂಡವನ್ನು 3-1 ಅಂತರದಿಂದ ಪರಾಭವಗೊಳಿಸಿತು. ಮಂಗಳೂರು ವಿ.ವಿ. 4ನೇ ಸ್ಥಾನಿಯಾಯಿತು.
ಸಮಾರೋಪ ಸಮಾರಂಭದ ಅನಂತರ ವಿಜೇತರಿಗೆ ಟ್ರೋಫಿ ವಿತರಿ ಸಿದ ಅದಮಾರು ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಕೀಡಾಸ್ಫೂರ್ತಿ ಎಲ್ಲರಲ್ಲೂ ಇರಬೇಕು, ಕ್ರೀಡೆಯನ್ನು ಕ್ರೀಡೆಯಂತೆ ಸ್ವೀಕರಿಸ ಬೇಕು ಎಂದು ಶುಭ ಹಾರೈಸಿದರು.
ಕರ್ನಾಟಕ ಬ್ಯಾಂಕ್ನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್., ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಡಾ| ಜರಾಲ್ಡ… ಸಂತೋಷ್ ಡಿ’ಸೋಜಾ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿಯ ಎಜಿಎಂ ರಾಜ್ಗೊàಪಾಲ್, ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ| ಜಿ.ಎಸ್. ಚಂದ್ರಶೇಖರ್, ಕಾಲೇಜಿನ ಖಜಾಂಚಿ ಗಣೇಶ್ ಹೆಬ್ಟಾರ್, ಪ್ರಾಂಶುಪಾಲ ಡಾ| ರಾಘವೇಂದ್ರ ಎ., ಪಿಪಿಸಿ ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಸುಕನ್ಯಾ ಮೇರಿ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ಕೋಶಾಧಿಕಾರಿ ಪ್ರಶಾಂತ ಹೊಳ್ಳ ಟಿ. ಸ್ವಾಗತಿಸಿದರು. ಕ್ರೀಡಾ ಕೂಟದ ಸಂಯೋಜಕ ಸುಕುಮಾರ ವಂದಿಸಿದರು. ಸುಮಲತಾ ಅವರು ನಿರೂಪಿಸಿದರು.
ವೈಯಕ್ತಿಕ ಸಾಧನೆ
-ಅತ್ಯುತ್ತಮ ಅಟ್ಯಾಕರ್-ಕುರುಕ್ಷೇತ್ರ ವಿವಿಯ ಸಾವನ್.
-ಲಿಬೆರೋ-ಚೆನ್ನೈನ ಎಸ್.ಆರ್.ಎಂ., ಐಎಸ್ಟಿಯ ಶ್ರೀಕಾಂತ್.
-ಸೆಟ್ಟರ್-ಕುರುಕ್ಷೇತ್ರ ವಿವಿಯ ಸಮೀರ್.
-ಬ್ಲಾಕರ್-ಚೆನ್ನೈನ ಎಸ್.ಆರ್.ಎಂ., ಐಎಸ್ಟಿಯ ಉಡುಪಿ ಮೂಲದ ಸೃಜನ್ ಶೆಟ್ಟಿ.
-ಯುವರ್ಸಲ್ ಆಟಗಾರ-ಕ್ಯಾಲಿಕಟ್ ವಿವಿಯ ಅರುಣ್.
-ಕೂಟದ ಆಟಗಾರ-ಕುರುಕ್ಷೇತ್ರ ವಿವಿಯ ಸೂರ್ಯನೀಶ್.