ಕಂಚಿಗೆ ತೃಪ್ತಿಪಟ್ಟ ಲಕ್ಷ್ಯ ಸೇನ್
Team Udayavani, Nov 19, 2018, 11:17 AM IST
ಹೊಸದಿಲ್ಲಿ: ಕೆನಡಾದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು 3ನೇ ವಿಶ್ವ ಜೂನಿಯರ್ ಕೂಟದಲ್ಲಿ ಲಕ್ಷ್ಯ ಸೇನ್ ಗೆದ್ದ ಚೊಚ್ಚಲ ಪದಕವಾಗಿದೆ.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಥಾಯ್ಲೆಂಡ್ನ ಕುನಾವುತ್ ವಿತಿದ್ಸರ್ನ್ ವಿರುದ್ಧ 22-20, 16-21, 13-21 ಗೇಮ್ಗಳಿಂದ ಸೋಲನುಭವಿಸಿದರು. ಸೇನ್ ಆರಂಭಿಕ ಗೇಮ್ನಲ್ಲಿ ಗೆದ್ದರೂ ಬಳಿಕ ಎಡವಿದರು. ಕಳೆದ ಜುಲೈನಲ್ಲಿ ನಡೆದ ಏಶ್ಯನ್ ಜೂನಿಯರ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಸೇನ್ ವಿರುದ್ಧ ಸೋತಿದ್ದ ವಿತಿದ್ಸರ್ನ್ ಇಲ್ಲಿ ಸೇಡು ತೀರಿಸಿಕೊಂಡರು.
ಈ ಕೂಟದಲ್ಲಿ ಭಾರತದ ಕೊನೆಯ ಭರವಸೆಯಾಗಿದ್ದ ಲಕ್ಷ್ಯ ಸೇನ್ 7 ವರ್ಷದ ಬಳಿಕ ದೇಶಕ್ಕೆ ಪದಕ ಗೆದ್ದು ತಂದಿದ್ದಾರೆ. 2011ರಲ್ಲಿ ಸಮೀರ್ ವರ್ಮ ಕಂಚಿನ ಪದಕ ಜಯಿಸಿದ್ದರು. 2010ರಲ್ಲಿ ಬಿ. ಸಾಯಿ ಪ್ರಣೀತ್ ಹಾಗೂ ಎಚ್. ಎಸ್. ಪ್ರಣಯ್ ಕಂಚಿನ ಪದಕ, 2008ರಲ್ಲಿ ಸೈನಾ ನೆಹ್ವಾಲ್ ಚಿನ್ನದ ಪದಕ ಜಯಿಸಿದ್ದರು.
ಮೊದಲ ಗೇಮ್ ಜಯಿಸಿದರೂ ನನ್ನ ಆಟವನ್ನು ಮುಂದುವರಿಸಲು ಸಾಧ್ಯವಾಗಿಲ್ಲ. ವಿತಿದ್ಸರ್ನ್ ಉಳಿದೆರಡು ಗೇಮ್ಗಳಲ್ಲಿ ಹೆಚ್ಚು ಬಲಿಷ್ಠರಾಗಿ ನನ್ನ ಬಲವಾದ ಹೊಡೆತಗಳಿಗೆ ಉತ್ತರಿಸಿ ಗೆಲುವು ದಾಖಲಿಸಿದರು.
-ಲಕ್ಷ್ಯ ಸೇನ್