ಆಡಿದರಷ್ಟೇ ಅವಕಾಶ: ಭಾರತದ ಕ್ರಿಕೆಟಿಗರಿಗೆ ಬಿಸಿಸಿಐ ಎಚ್ಚರಿಕೆ
Team Udayavani, Sep 17, 2018, 1:55 PM IST
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 4-1 ಅಂತರದ ಭಾರೀ ಸೋಲು ಅನುಭವಿಸಿದ ಭಾರತ ತಂಡದ ವಿರುದ್ಧ ಟೀಕೆಗಳ ಸುರಿಮಳೆಯೆ ಹರಿದಿದೆ. ಈ ಬೆನ್ನಲ್ಲೇ, ಆಡಿದರಷ್ಟೇ ತಂಡದಲ್ಲಿ ಉಳಿಗಾಲ ಎಂದು ಬಿಸಿಸಿಐ ಆಯ್ಕೆ ಸಮಿತಿ ಭಾರತೀಯ ಬ್ಯಾಟ್ಸ್ಮನ್ಗೆ ಎಚ್ಚರಿಕೆ ರವಾನಿಸಿದೆ.
ವಿದೇಶಿ ಪಿಚ್ಗಳಲ್ಲಿ ಭಾರತೀಯ ತಂಡ ಕಳಪೆ ಪ್ರದರ್ಶನ ನೀಡಿರುವುದನ್ನು ಬಿಸಿಸಿಐ ಗಂಭೀರವಾಗಿ ತೆಗೆದುಕೊಂಡಿದೆ. ಈ ಕುರಿತು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಮಾಧ್ಯಮ ಸಂದರ್ಶನವೊಂದರಲ್ಲಿ ಕಠಿನ ಎಚ್ಚರಿಕೆ ನೀಡಿದ್ದಾರೆ.
“ಸಾಕಷ್ಟು ಅವಕಾಶ ನೀಡಿದ ಹೊರತಾಗಿಯೂ ಅದನ್ನು ಬಳಸಿಕೊಳ್ಳಲು ಆಟಗಾರರು ವಿಫಲರಾದರೆ ದೇಶಿ ಕ್ರಿಕೆಟ್ ಹಾಗೂ ಭಾರತ “ಎ’ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರಿಗೆ ಅವಕಾಶ ನೀಡಬೇಕಾಗುತ್ತದೆ. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಅನುಪಸ್ಥಿತಿ ನಡುವೆಯೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ಆದರೆ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ ಭಾರತ ಸೋಲು ಕಾಣುವಂತಾಯಿತು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಉತ್ತಮ ಆಟ ಆಡಿದವರಿಗಷ್ಟೇ ಮುಂದಿನ ಸರಣಿಗಳಲ್ಲಿ ತಂಡದಲ್ಲಿ ಸ್ಥಾನ ನೀಡಲಾಗುತ್ತದೆ’ ಎಂದು ಪ್ರಸಾದ್ ತಿಳಿಸಿದ್ದಾರೆ.