ಎನ್ಸಿಎಯಲ್ಲಿ ಫಿಟ್ನೆಸ್ ಪರೀಕ್ಷೆಗೆ ಬುಮ್ರಾ ನಕಾರ
Team Udayavani, Dec 20, 2019, 11:34 PM IST
ಕೋಲ್ಕತಾ: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ವೇಗಿ ಜಸ್ಪ್ರೀತ್ ಬುಮ್ರಾ ದೈಹಿಕ ಪರೀಕ್ಷೆಗೆ ನಕಾರ ವ್ಯಕ್ತಪಡಿಸಿದ್ದಾರೆ ಎನ್ನುವ ಸುದ್ದಿ ಬಯಲಾಗಿದೆ. ಇದರಿಂದ ರಾಹುಲ್ ದ್ರಾವಿಡ್ ಕೂಡ ಬುಮ್ರಾ ಪರೀಕ್ಷೆಗೆ ಅರೆಮನಸ್ಸು ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, “ದ್ರಾವಿಡ್ ಜತೆ ಮಾತಾಡಿ ಸಮಸ್ಯೆ ಬಗೆಹರಿಸುವೆ’ ಎಂದಿದ್ದಾರೆ.
“ಭಾರತದ ಯಾವುದೇ ಕ್ರಿಕೆಟಿಗರಾಗಿರಲಿ, ಅವರು ಎನ್ಸಿಎಗೆ ತೆರಳಿ ಫಿಟ್ನೆಸ್ ಸರಿಪಡಿಸಿಕೊಳ್ಳಬೇಕಾದುದು ಕಡ್ಡಾಯ. ಎನ್ಸಿಎ ಭಾರತೀಯ ಕ್ರಿಕೆಟಿಗರಿಗಾಗಿಯೇ ರೂಪಿಸಲಾಗಿದೆ. ಬುಮ್ರಾ ಒಪ್ಪುವು ದಾದರೆ ಎನ್ಸಿಎ ಫಿಸಿಯೋ ಅವರನ್ನು ಮುಂಬಯಿಗೆ ಕಳಿ ಸುತ್ತೇವೆ. ಎನ್ಸಿಎನಲ್ಲಿ ನುರಿತ ಸಿಬಂದಿಗಳಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಗಂಗೂಲಿ ತಿಳಿಸಿದರು.
ಎನ್ಸಿಎನಲ್ಲಿ ಸೂಕ್ತ ಸಿಬಂದಿ ಗಳಿಲ್ಲ ಎನ್ನುವ ಕೂಗು ಕೇಳಿ ಬಂದಿದೆ. ಭುವನೇಶ್ವರ್, ಹಾರ್ದಿಕ್ ಪಾಂಡ್ಯ ಎನ್ಸಿಎ ಸೇರಿ ಹೊರಬಂದ ಬಳಿಕ ಎನ್ಸಿಎ ಬಗ್ಗೆ ಅಷ್ಟೊಂದು ಉತ್ತಮ ಅಭಿಪ್ರಾಯ ವ್ಯಕ್ತವಾಗಿಲ್ಲ.
ಸದ್ಯ ಬುಮ್ರಾ ಡೆಲ್ಲಿ ತಂಡದ ಟ್ರೈನರ್ ರಜನೀಕಾಂತ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬುಮ್ರಾ ಫಿಟ್ ಆಗಿದ್ದಾರೆ. ಆದರೆ ತಂಡಕ್ಕೆ ಮರಳಲು ಅವರಿಗೆ ಎನ್ಸಿಎನಿಂದ ಕ್ಲಿಯೆರೆನ್ಸ್ ಪತ್ರ ಬೇಕಿದೆ.