ಓವರ್ ತ್ರೋ ಪ್ರಕರಣಕ್ಕೆ ವಿಷಾದವಿಲ್ಲ: ಧರ್ಮಸೇನ
Team Udayavani, Jul 22, 2019, 5:40 AM IST
ಕೊಲಂಬೊ: ಇಂಗ್ಲೆಂಡ್ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಓವರ್ ತ್ರೋ ರನ್ ಪ್ರಕರಣಕ್ಕೆ ತಾನು ವಿಷಾದಿಸುವುದಿಲ್ಲ ಎಂದು ಅಂಪಾಯರ್ ಕುಮಾರ ಧರ್ಮಸೇನ ಹೇಳಿದ್ದಾರೆ. ಆದರೆ ತೀರ್ಪು ನೀಡುವಾಗ ತಪ್ಪು ಆಗಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.
“ಟಿವಿ ರೀಪ್ಲೇಗಳನ್ನು ನೋಡಿ ಹೇಳಿಕೆಗಳನ್ನು ನೀಡುವುದು ಸುಲಭ. ರೀಪ್ಲೇ ನೋಡಿದ ಬಳಿಕ ನನ್ನಿಂದ ತಪ್ಪಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಮೈದಾನದಲ್ಲಿ ನಮಗೆ ಟಿವಿ ನೋಡುವ ಸೌಲಭ್ಯ ಇರುವುದಿಲ್ಲ ಮತ್ತು ಈ ತೀರ್ಪಿಗಾಗಿ ನಾನು ವಿಷಾದಿಸುವುದಿಲ್ಲ. ಅಲ್ಲದೆ ಐಸಿಸಿಯೂ ನನ್ನ ನಿರ್ಧಾರವನ್ನು ಅಭಿನಂದಿಸಿದೆ’ ಎಂದಿದ್ದಾರೆ ಧರ್ಮಸೇನ.
ಲೆಗ್ ಅಂಪಾಯರ್ ಜತೆ ಚರ್ಚೆ
“ತೀರ್ಪು ನೀಡುವ ಮೊದಲು ಸಂವಹನ ಉಪಕರಣದ ಮೂಲಕ ಲೆಗ್ ಅಂಪಾಯರ್ ಮರಾçಸ್ ಎರಸ್ಮಸ್ ಅವರನ್ನು ಸಂಪರ್ಕಿಸಿದ್ದೆ. ಮಾತ್ರವಲ್ಲದೆ ಈ ಸಂವಾದ ಕೇಳಿಸಿಕೊಂಡ ಇತರ ಅಂಪಾಯರ್ಗಳೂ ಆರು ರನ್ ನೀಡಲು ಒಪ್ಪಿದ್ದರು. ಯಾರೂ ಔಟಾಗದಿರುವುದರಿಂದ ಐಸಿಸಿ ನಿಯಮಾವಳಿಗಳಲ್ಲಿ ಈ ಸನ್ನಿವೇಶವನ್ನು ಮೂರನೇ ಅಂಪಾಯರ್ ಪರಿಶೀಲನೆಗೊಪ್ಪಿಸುವ ಆಯ್ಕೆ ಇರಲಿಲ್ಲ. ಹೀಗಾಗಿ ಲೆಗ್ ಅಂಪಾಯರ್ ಸಂಪರ್ಕಿಸಿ ನಿರ್ಧಾರ ಕೈಗೊಂಡೆ. ಟಿವಿ ರೀಪ್ಲೇ ನೋಡದ ಕಾರಣ ಬ್ಯಾಟ್ಸ್ಮನ್ ಎರಡನೇ ರನ್ ಪೂರ್ತಿ ಮಾಡಿದ್ದಾರೆಂದು ತೀರ್ಮಾನಿಸಿದೆವು’ ಎಂದು ಧರ್ಮಸೇನ ವಿವರಿಸಿದ್ದಾರೆ.