ಚಾಂಪಿಯನ್ ವಿದರ್ಭಕ್ಕೆ ಸೌರಾಷ್ಟ್ರ ಎದುರಾಳಿ
Team Udayavani, Feb 3, 2019, 12:30 AM IST
ನಾಗ್ಪುರ: ರಣಜಿ ಟ್ರೋಫಿಯ ಫೈನಲ್ ಸಮರಕ್ಕೆ ವೇದಿಕೆ ಸಜ್ಜಾಗಿದೆ. ನಾಗ್ಪುರದಲ್ಲಿ ರವಿವಾರದಿಂದ ಹಾಲಿ ಚಾಂಪಿಯನ್ ವಿದರ್ಭ-ಸೌರಾಷ್ಟ್ರ ನಡುವಣ ಫೈನಲ್ ಹಣಾಹಣಿ ಆರಂಭವಾಗಲಿದೆ.
ಎರಡು ಬಲಿಷ್ಠ ತಂಡಗಳ ನಡುವೆ ಫೈನಲ್ ಕಾದಾಟ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಲೀಗ್ ಹಂತದಲ್ಲಿ ಈ ಎರಡು ತಂಡಗಳು ಮುಖಾಮುಖೀಯಾಗಿದ್ದರೂ, ಪಂದ್ಯ ಡ್ರಾಗೊಂಡಿತ್ತು. ಪ್ರಶಸ್ತಿ ಜಯಿಸಲು ಎರಡು ತಂಡಗಳಲ್ಲಿ ಒತ್ತಡ ಹೆಚ್ಚಿದೆ.
ಬಲಿಷ್ಠ ವಿದರ್ಭ
ಹಾಲಿ ಚಾಂಪಿಯನ್ ವಿದರ್ಭ ಕಳೆದ ಬಾರಿ ಫೈನಲ್ನಲ್ಲಿ ದಿಲ್ಲಿ ವಿರುದ್ಧ ಜಯಿಸಿ ಮೊದಲ ಬಾರಿಗೆ ಟ್ರೋಫಿ ಜಯಿಸಿತ್ತು. ಈ ಬಾರಿಯೂ ಫೈನಲ್ ಗೆದ್ದು ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಸತತ ಎರಡನೇ ಬಾರಿ ಫೈನಲ್ಗೆ ಪ್ರವೇಶಿಸಿರುವ ವಿದರ್ಭ ಲೀಗ್ ಹಂತ, ಕ್ವಾರ್ಟರ್ಫೈನಲ್ ಹಾಗೂ ಸೆಮಿಫೈನಲ್ನಲ್ಲಿ ನೀಡಿರುವ ನಿರ್ವಹಣೆ ಗಮನಿಸಿದರೆ ಕಪ್ ಗೆಲ್ಲುವ ಎಲ್ಲ ಅರ್ಹತೆಯಿದೆ ಮತ್ತು ಫೇವರಿಟ್ ತಂಡವೆನಿಸಿದೆ. ಸೌರಾಷ್ಟ್ರ ತಂಡದ ಪರ ಚೇತೇಶ್ವರ ಪೂಜಾರ ಕ್ರೀಸ್ಗೆ ಕಚ್ಚಿ ನಿಂತರೇ ವಿದರ್ಭಕ್ಕೆ ಮುಳುವಾಗುವ ಸಾಧ್ಯತೆಗಳಿವೆ.
ಎಲೈಟ್ “ಎ’ ಗುಂಪಿನಲ್ಲಿ ವಿದರ್ಭ ನೀಡಿದ ನಿರ್ವಹಣೆ ಉತ್ತಮವಾಗಿತ್ತು. ಲೀಗ್ನಲ್ಲಿ ಆಡಿದ ಒಟ್ಟು 8 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 5ನ್ನು ಡ್ರಾ ಮಾಡಿಕೊಂಡಿತ್ತು. ಲೀಗ್ನಲ್ಲಿ ಛತ್ತೀಸ್ಗಢ ವಿರುದ್ಧ 10 ವಿಕೆಟ್ ಜಯ ಹಾಗೂ ಮುಂಬಯಿ ವಿರುದ್ಧ ಇನ್ನಿಂಗ್ಸ್ ಮತ್ತು 145 ರನ್ ಗೆಲುವು ಸಾಧಿಸಿದ್ದು ಗಮನಾರ್ಹ ಸಾಧನೆ. ಕ್ವಾರ್ಟರ್ಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಇನ್ನಿಂಗ್ಸ್ ಮತ್ತು 115 ರನ್ ಗೆಲುವು ಸಾಧಿಸಿದ್ದ ವಿದರ್ಭ ಸೆಮಿಫೈನಲ್ನಲ್ಲಿ ಕೇರಳ ವಿರುದ್ಧ ಇನ್ನಿಂಗ್ಸ್ ಹಾಗೂ 11 ರನ್ಗಳಿಂದ ಜಯಿಸಿ ಫೈನಲ್ ಪ್ರವೇಶಿಸಿತ್ತು.
ವಿದರ್ಭ ಪರ ಅನುಭವಿ ಬ್ಯಾಟ್ಸ್ಮನ್ ವಾಸೀಂ ಜಾಫರ್ 10 ಪಂದ್ಯಗಳಲ್ಲಿ 77.15 ರನ್ ಸರಾಸರಿಯಲ್ಲಿ 1003 ರನ್ ಬಾರಿಸಿದ್ದಾರೆ. ವೈಯಕ್ತಿಕ 206 ರನ್ ಗರಿಷ್ಠ. 4 ಶತಕ ಹಾಗೂ 2 ಅರ್ಧಶತಕ ಬಾರಿಸಿ ತಂಡದ ಬ್ಯಾಟಿಂಗ್ ವಿಭಾಗದ ಆಧಾರ ಸ್ತಂಭವಾಗಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಆದಿತ್ಯ ಸರ್ವಾಟೆ 10 ಪಂದ್ಯಗಳಲ್ಲಿ 44 ವಿಕೆಟ್ ಕಬಳಿಸಿದ್ದಾರೆ. 4 ಸಲ 5 ವಿಕೆಟ್ಗಳ ಗೊಂಚಲನ್ನು ಕಿತ್ತಿದ್ದಾರೆ. 43ಕ್ಕೆ 6 ವಿಕೆಟ್ ಅವರ ಅತ್ಯುತ್ತಮ ಬೌಲಿಂಗ್. ಸಂಘಟಿತ ಪ್ರದರ್ಶನ ವಿದರ್ಭದ ತಂಡದ ಬಲ.
ಸೌರಾಷ್ಟ್ರಕ್ಕೆ ಟ್ರೋಫಿ ಕನಸು
ಸೌರಾಷ್ಟ್ರ 3ನೇ ಬಾರಿಗೆ ರಣಜಿ ಟ್ರೋಫಿಯ ಫೈನಲ್ ಪ್ರವೇಶಿಸಿದೆ. 2012-13 ಹಾಗೂ 2015-16ರಲ್ಲಿ ಫೈನಲ್ಗೆ ತಲುಪಿದ್ದ ಸೌರಾಷ್ಟ್ರ ಟ್ರೋಫಿ ಗೆಲ್ಲುವಲ್ಲಿ ಎಡವಿತ್ತು. ಹೀಗಾಗಿ ಟ್ರೋಫಿ ಕನಸನ್ನು ನನಸಾಗಿಸುವ ಅವಕಾಶವೊಂದು ಸೌರಾಷ್ಟ್ರ ತಂಡಕ್ಕೆ ಒಲಿದಿದೆ. 1936-37ರಲ್ಲಿ ಈಗಿನ ಸೌರಾಷ್ಟ್ರ ಅಂದು ನವನಗರ ಹೆಸರಲ್ಲಿ ಆಡಿ ಮೊದಲ ಸಲ ಕಪ್ ಗೆದ್ದಿತ್ತು. ಬಳಿಕ ವೆಸ್ಟರ್ನ್ ಇಂಡಿಯಾ ಆಗಿ ಬದಲಾಗಿದ್ದ ಇಂದಿನ ಸೌರಾಷ್ಟ್ರ 1943-44ರಲ್ಲಿ ಕಪ್ ಗೆದ್ದಿದ್ದನ್ನು ಸ್ಮರಿಸಬಹುದು.
ಸೌರಾಷ್ಟ್ರ ಕೂಡ ಎಲೈಟ್ “ಎ’ ಗುಂಪಿನಲ್ಲಿ ಆಡಿ ಫೈನಲ್ ಪ್ರವೇಶಿಸಿರುವುದು ವಿಶೇಷ. ಗುಂಪು ಹಂತದಲ್ಲಿ ಒಟ್ಟು 8 ಪಂದ್ಯ ಆಡಿದ್ದ ಸೌರಾಷ್ಟ್ರ 3 ಪಂದ್ಯದಲ್ಲಿ ಗೆದ್ದಿದ್ದರೆ, 5 ಪಂದ್ಯ ಡ್ರಾ ಮಾಡಿಕೊಂಡಿತ್ತು. ಕ್ವಾರ್ಟರ್ಫೈನಲ್ನಲ್ಲಿ ಉತ್ತರ ಪ್ರದೇಶ, ಸೆಮಿಫೈನಲ್ನಲ್ಲಿ ಕರ್ನಾಟಕವನ್ನು ಸೋಲಿಸಿ ಫೈನಲ್ಗೇರಿತ್ತು. ಸೌರಾಷ್ಟ್ರದ ಬ್ಯಾಟಿಂಗ್ ವಿಭಾಗ ಬಲಿಷ್ಠuವಾಗಿದೆ. ಶೆಲ್ಡನ್ ಜಾಕ್ಸನ್, ಚೇತೇಶ್ವರ ಪೂಜಾರ ತಂಡದ ಪ್ರಮುಖ ಆಟಗಾರರು. ಇಲ್ಲಿಯವರಗೆ ಆಡಿರುವ ಪಂದ್ಯಗಳಲ್ಲಿ ಬೌಲರ್ಗಳೂ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ.
ಆರಂಭ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಟಾರ್ ನ್ಪೋರ್ಟ್ಸ್