Rishabh: ಮನೋರಂಜನ ಪಂದ್ಯದಲ್ಲಿ ರಿಷಬ್ ಬ್ಯಾಟಿಂಗ್ ಅಭ್ಯಾಸ
Team Udayavani, Aug 16, 2023, 11:17 PM IST
ಬೆಂಗಳೂರು: ರಿಷಬ್ ಪಂತ್ ಅವರು ಸ್ವಾತಂತ್ರ್ಯ ದಿನದಂದು ನಡೆದ ಮನೋರಂಜನ ಪಂದ್ಯದಲ್ಲಿ ಕೆಲವು ಹೊತ್ತು ಬ್ಯಾಟಿಂಗ್ ನಡೆಸಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ರಂಗಕ್ಕೆ ಮರಳುವ ಸಾಧ್ಯತೆಯನ್ನು ತೆರೆದಿಟ್ಟರು.
ರಿಷಬ್ ಪಂತ್ ಅವರು ಕಳೆದ ಡಿಸೆಂಬರ್ನಲ್ಲಿ ಡೆಹ್ರಾಡೂನ್-ದಿಲ್ಲಿ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಅವರೀಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಶಿಬಿರದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಪಂತ್ ಅವರು ಜೆಎಸ್ಡಬ್ಲ್ಯು ಫೌಂಡೇಶನ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಲ್ಪ ಹೊತ್ತು ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಈ ವೇಳೆ ಮಾತನಾಡಿದ ಅವರು ಯುವಕರು ಕ್ರೀಡೆಯನ್ನು ಆನಂದಿಸಬೇಕೆಂದು ಹೇಳಿದರು.
ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕಳೆದ ತಿಂಗಳು ಪಂತ್ ಅವರ ದೈಹಿಕ ಕ್ಷಮತೆಯ ಬಗ್ಗೆ ಮಾಹಿತಿ ನೀಡಿದ್ದು ಪುನರ್ವಸತಿ ಶಿಬಿರದಲ್ಲಿ ಅವರು ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಮಾತ್ರವಲ್ಲದೇ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ ಮತ್ತು ನೆಟ್ನಲ್ಲಿ ವಿಕೆಟ್ಕೀಪಿಂಗ್ ನಡೆಸುತ್ತಿದ್ದಾರೆ ಎಂದು ತಿಳಿಸಿದೆ.