ವಡಾ ಪಾವ್ ಟ್ವೀಟ್ಗೆ ವೀರೂ ಸ್ಪಷ್ಟನೆ
Team Udayavani, Apr 8, 2022, 6:49 AM IST
ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ತಂಡದ ಹ್ಯಾಟ್ರಿಕ್ ಸೋಲಿನ ಬಳಿಕ ವೀರೇಂದ್ರ ಸೆಹವಾಗ್ ಮಾಡಿದ ಟ್ವೀಟ್ ಒಂದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ವೀರೂ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
“ಬಾಯಿಗೆ ಬಂದ ತುತ್ತನ್ನು, ಕ್ಷಮಿಸಿ ವಡಾ ಪಾವ್ ಅನ್ನು ಕಸಿದುಕೊಂಡರು’ ಎಂದು ವೀರೇಂದ್ರ ಸೆಹವಾಗ್ ಕೆಕೆಆರ್ ಗೆಲುವನ್ನು ಕೇಂದ್ರೀಕರಿಸಿ ಟ್ವೀಟ್ ಮಾಡಿದ್ದರು. ಜತೆಗೆ ಪ್ಯಾಟ್ ಕಮಿನ್ಸ್ ಕ್ಲೀನ್ ಹಿಟ್ಟಿಂಗ್, ಅದ್ಭುತ ಪ್ರದರ್ಶನ ಎಂದು ಪ್ರಶಂಸಿಸಿದ್ದರು.
ಮುಂಬಯಿ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ವಡಾ ಪಾವ್ ಅನ್ನು ಪ್ರಸ್ತಾವಿಸಿ ತಮ್ಮ ತಂಡದ ಕಾಲೆಳೆದದ್ದು ಮುಂಬೈ ಇಂಡಿಯನ್ಸ್ ಹಾಗೂ ರೋಹಿತ್ ಶರ್ಮ ಅಭಿಮಾನಿಗಳನ್ನು ರೊಚ್ಚಿ ಗೆಬ್ಬಿಸಿತ್ತು. ಒಮ್ಮೆಯೂ ಐಪಿಎಲ್ ಗೆಲ್ಲಲಾಗದವರೊಬ್ಬರು 5 ಬಾರಿಯ ಚಾಂಪಿಯನ್ ತಂಡವನ್ನು ಹೀಯಾಳಿ ಸುತ್ತಿದ್ದಾರೆ ಎಂದು ಸೆಹವಾಗ್ ಅವರನ್ನು ಟ್ರೋಲ್ ಮಾಡಲಾರಂಭಿಸಿದರು.
ಬಳಿಕ ಇದಕ್ಕೆ ಸೆಹವಾಗ್ ಟ್ವೀಟ್ ಮೂಲಕವೇ ಸ್ಪಷ್ಟನೆ ನೀಡಿದರು. “ರೋಹಿತ್ ಅಭಿಮಾನಿಗಳೇ, ಸ್ವಲ್ಪ ತಣ್ಣಗಾಗಿ. ನಿಮ್ಮೆಲ್ಲರಿಗಿಂತ ನಾನು ರೋಹಿತ್ ಬ್ಯಾಟಿಂಗ್ನ ದೊಡ್ಡ ಅಭಿಮಾನಿಯಾಗಿದ್ದೇನೆ’ ಎಂದಿದ್ದಾರೆ.