Test ಪದಾರ್ಪಣೆ ಪಂದ್ಯದಲ್ಲೇ ಸರ್ಫಾರಾಜ್ ರನ್ ಔಟ್ ಗೆ ಬಲಿ: ಕ್ಯಾಪ್ ಕಿತ್ತೆಸೆದ ರೋಹಿತ್
ಹಲವರ ಅಸಮಾಧಾನ... ಶತಕ ಬಾರಿಸಿದ ಬಳಿಕ ಸಂಭ್ರಮಿಸದ ಜಡೇಜಾ!
Team Udayavani, Feb 15, 2024, 5:30 PM IST
ರಾಜಕೋಟ್: ಪ್ರವಾಸಿ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭರವಸೆಯ ಆಟಗಾರ ಸರ್ಫರಾಜ್ ಖಾನ್ ಪದಾರ್ಪಣೆ ಪಂದ್ಯದಲ್ಲೇ ಗಮನ ಸೆಳೆದಿದ್ದು ,ಅತ್ಯುತ್ತಮ ಆಟವಾಡುತ್ತಿದ್ದಾಗಲೇ ರನ್ ಔಟ್ ಆಗಿ ಭಾರಿ ನಿರಾಶೆಗೆ ಗುರಿಯಾಗಿದ್ದಾರೆ.
ಅಮೋಘ ಆಟವಾಡಿದ ಸರ್ಫರಾಜ್ 66 ಎಸೆತಗಳಿಂದ 62 ರನ್ ಗಳಿಸಿದ್ದ ವೇಳೆ ರನ್ ಔಟಾಗಿದ್ದಾರೆ. ಶತಕದ ಹೊಸ್ತಿಲಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಅವರು ಆಂಡರ್ಸನ್ ಎಸೆದ ಚೆಂಡನ್ನು ಹೊಡೆದು ವಿಕೆಟ್ಗಳ ನಡುವೆ ಓಡುವಾಗ ಸರ್ಫರಾಜ್ ಖಾನ್ ಮುನ್ನುಗ್ಗಿ ಓಡಿದರು. ಜಡೇಜಾ ಹಿಂದೆ ಸರಿದರು. ವುಡ್ ಗುರಿಯಿಟ್ಟು ಸಿಂಗಲ್ ಸ್ಟಂಪ್ಗೆ ಹೊಡೆದಿದ್ದು ಸರ್ಫರಾಜ್ ಹಿಂತಿರುಗಲೇ ಬೇಕಾಯಿತು. ಎಲ್ಲರೂ ಒಂದು ಕ್ಷಣ ಶಾಕ್ ಗೆ ಒಳಾಗಾಗಬೇಕಾಯಿತು. ಪೆವಿಲಿಯನ್ ನಲ್ಲಿದ್ದ ನಾಯಕ ರೋಹಿತ್ ಶರ್ಮ ಕ್ಯಾಪ್ ಕಿತ್ತೆಸೆದು ಆಕ್ರೋಶ ಹೊರ ಹಾಕಿದ್ದು ಕೆಮರಾ ಕಣ್ಣುಗಳಲ್ಲಿ ಸೆರೆಯಾಯಿತು.
ಸರ್ಫರಾಜ್ ಪೆವಿಲಿಯನ್ ಗೆ ಭಾರೀ ನಿರಾಶರಾಗಿ ಮರಳಿದ ಬೆನ್ನಲ್ಲೇ ಜಡೇಜಾ ಶತಕ ಸಿಡಿಸಿದರು. ತಮ್ಮ ಎಂದಿನ ಶೈಲಿಯ ಬ್ಯಾಟ್ ತಿರುಗಿಸುವುದು ಹೊರತಾಗಿ ಯಾವುದೇ ದೊಡ್ಡ ಆಚರಣೆ ಮಾಡಲಿಲ್ಲ. ಸರ್ಫರಾಜ್ ಕೊನೆಯ ಎಸೆತದಲ್ಲಿ ರನೌಟ್ ಆಗಿರುವುದು ಜಡೇಜಾ ಅವರ ಸಂಭ್ರಮವನ್ನು ಕಸಿದುಕೊಂಡಿತು.
ಸಾಮಾಜಿಕ ತಾಣದಲ್ಲಿ ಹಲವರು ಈ ಬಗ್ಗೆ ಬರೆದುಕೊಂಡಿದ್ದು, ಅತ್ಯುತ್ತಮ ಆಟವಾಡಿದ ಸರ್ಫರಾಜ್ ಶತಕ ಸಿಡಿಸುತ್ತಿದ್ದರು. ಆದರೆ ಅದು ಜಡೇಜಾ ಮಾಡಿದ ಗೊಂದಲದಿಂದ ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 86 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ. ಜಡೇಜಾ 110 ರನ್ , ಕುಲದೀಪ್ ಯಾದವ್ 1 ರನ್ ಗಳಿಸಿ ಆಟವಾಡುತ್ತಿದ್ದಾರೆ.
ಕ್ಷಮೆಯಾಚಿಸಿದ ಜಡೇಜಾ
ದಿನದಾಟ ಮುಗಿದ ಬಳಿಕ ರವೀಂದ್ರ ಜಡೇಜ ಸರ್ಫರಾಜ್ ರಲ್ಲಿ ಕ್ಷಮೆ ಕೇಳಿದ್ದಾರೆ.