“ಈ ಸಲ ಕಪ್ ನಮ್ದೇ ಗುರು…’
Team Udayavani, Apr 8, 2018, 6:10 AM IST
ಕುಂದಾಪುರ: “”ಮಲ್ಯ ಊರು ಬಿಟ್ಟು ಹೋಗಾಯ್ತಲ್ಲ, ಗೇಲ್ ಆರ್ಸಿಬಿ ಬಿಟ್ಟಾಯ್ತಲ್ಲ, ಕನ್ನಡಿಗರು ಟೀಮ್ನಲ್ಲಿ ಕಾಣಿ¤ಲ್ಲ ಅಲ್ವಾ, ಆದ್ರೂ ಟೀಂ ನಮ್ದ ಬಿಡಕಾಗಲ್ಲ, ಸೀಸನ್ ಹತ್ತು ಕಳೆದು ಹೋಯಿತಲ್ವಾ, ರೀಸನ್ ಹೇಳಿ ಸುಸ್ತಾಯಿತಲ್ವಾ, ಪ್ರತಿ ವರ್ಷ ನಾವು ಹೇಳ್ಳೋದು ಒಂದೇ… ಈ ಸಲ ಕಪ್, ಈ ಸಲ ಕಪ್ ನಮ್ದೇ ಗುರು…”
ಇದು ಕಳೆದ 10 ಐಪಿಎಲ್ ಆವೃತ್ತಿಗಳಲ್ಲಿ 3 ಬಾರಿ ಫೈನಲ್ಗೇರಿದರೂ ಒಮ್ಮೆಯೂ ಚಾಂಪಿಯನ್ ಆಗದ ಆರ್ಸಿಬಿ ತಂಡ ಈ ಬಾರಿಯಾದರೂ ಕಪ್ ಗೆಲ್ಲಲ್ಲಿ ಎನ್ನುವ ಅಭಿಲಾಷೆಯಿಂದ ಕರಾವಳಿಯ ಹುಡುಗರು ಸೇರಿ ಮಾಡಿರುವ ಆಲ್ಬಂ ಹಾಡು.
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದೇ ವೇಳೆ ರಾಯಲ್ ಚಾಲೆಂಜರ್ ಬೆಂಗಳೂರು (ಆರ್ಸಿಬಿ) “ಈ ಸಲ ಕಪ್ ನಮೆªà’ ಎನ್ನುವ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಕರುನಾಡಿನ ತಂಡಕ್ಕೆ ಮಂಗಳೂರು ಹಾಗೂ ಉಡುಪಿಯ ಯುವಕರ ತಂಡವೊಂದು ಆಲ್ಬಂ ಹಾಡೊಂದನ್ನು ರಚಿಸಿ ಚಿಯರ್ಅಪ್ ಹೇಳಿದೆ.
ಆಲ್ಬಂ ಹಾಡಿನ ತಂಡ
ನಟ, ಕಾರ್ಯಕ್ರಮ ನಿರೂಪಕ, ಆರ್ಜೆ ರೂಪೇಶ್ ಶೆಟ್ಟಿ ಅವರ ನೇತೃತ್ವದ ತಂಡ ಈ ಹಾಡನ್ನು ರಚಿಸಿದೆ. ಹಾಡಿನ ಪರಿಕಲ್ಪನೆ ರೂಪೇಶ್ ಅವರದ್ದಾಗಿದ್ದು, ಹಾಡಿದವರು ಕೂಡ ಅವರೇ ಆಗಿದ್ದಾರೆ. ಡಾಲ್ವಿನ್ ಕೊಳಲಗಿರಿ ಸಂಗೀತ ನಿರ್ದೇಶನ ಮಾಡಿದ್ದು, ನವೀನ್ ಆರ್ಯನ್ ಕೊರಿಯೋಗ್ರಾಫರ್, ವಿಶ್ವನಾಥ ಕೊಡಿಕಲ್ ವೀಡಿಯೋ, ಕ್ಯಾಮರಾ ಹಾಗೂ ಎಡಿಟಿಂಗ್ ಕಾರ್ಯವನ್ನು ನಿರ್ವಹಿಸಿದ್ದಾರೆ. ಪೋಸ್ಟರ್ ಕಾರ್ಯವನ್ನು ಅನಿಲ್ ನಾವೂರು ನಿರ್ವಹಿಸಿದ್ದಾರೆ. ಅವರೊಂದಿಗೆ ಉಡುಪಿ ಹಾಗೂ ಮಂಗಳೂರಿನ ಯುವಕರು ಸಹಕರಿಸಿದ್ದಾರೆ.
ಹಾಸ್ಯವೇ ಹಾಡಾಯಿತು..
ಸದ್ಯ ಇರುವ ಐಪಿಎಲ್ ತಂಡಗಳಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ತಂಡಗಲ್ಲಿ ಆರ್ಸಿಬಿಯೂ ಒಂದು. ಫೈನಲ್, ಸೆಮಿಫೈನಲ್ ವರೆಗೆ ಹೋಗಿ ಪ್ರಮುಖ ಹಂತದಲ್ಲಿ ಸೋತು “ಐಪಿಎಲ್ನ ಚೋಕರ್’ ಎನ್ನುವ ಹಣೆಪಟ್ಟಿ ಹೊತ್ತ ಆರ್ಸಿಬಿ ತಂಡ ಕೆಲ ವರ್ಷಗಳಿಂದ “ಈ ಸಲವಾದರೂ ಕಪ್’ ಗೆಲ್ಲುತ್ತದೆ ಎನ್ನುವ ಮಾತು ಅಭಿಮಾನಿಗಳ ಬಾಯಲ್ಲಿ ಸರ್ವೇ ಸಾಮಾನ್ಯವಾಗಿರುತ್ತಿತ್ತು. ಆದರೆ ಪ್ರತಿ ಬಾರಿಯೂ ನಿರಾಶೆಯೇ ಕಾದಿರುತ್ತಿತ್ತು. ಈ ಮಾತುಗಳು ತಮಾಷೆಯಾಗಿ, ಈಗ ಅದೇ ಅನೇಕ ಹಾಡುಗಳಿಗೆ, ತಂಡದ ಅಧಿಕೃತ ಥೀಂ ಸಾಂಗ್ಗೂ ಪ್ರೇರಣೆಯಾಗಿದೆ.
40 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ
ಹಾಡನ್ನು ಯೂಟ್ಯೂಬ್ನಲ್ಲಿ ಹರಿಯಬಿಡಲಾಗಿದ್ದು, ಕೇವಲ 6 ದಿನದಲ್ಲಿ ವೀಕ್ಷಿಸಿದವರ ಸಂಖ್ಯೆ 40 ಸಾವಿರ ದಾಟಿದೆ. ಇನ್ನೆರಡು ದಿನಗಳಲ್ಲಿ ವೀಕ್ಷಕರ ಸಂಖ್ಯೆ 50 ಸಾವಿರ ತಲುಪುವ ಎಲ್ಲ ಸಾಧ್ಯತೆಗಳಿವೆ. ಫೇಸ್ಬುಕ್ನಲ್ಲಿ 20 ಸಾವಿರ ಹಾಗೂ ಒಂದು ಖಾಸಗಿ ಚಾನೆಲ್ನಲ್ಲಿ ಸುಮಾರು 20 ಸಾವಿರ ಮಂದಿ ಈ ಆಲ್ಬಂ ಹಾಡನ್ನು ವೀಕ್ಷಿಸಿದ್ದಾರೆ.
ಈ ಸಲವಾದರೂ ಆರ್ಸಿಬಿ ಗೆಲ್ಲಲಿ…
ಆರ್ಸಿಬಿ ತಂಡ ಗೆಲ್ಲಲಿ ಎನ್ನುವ ಕಾರಣಕ್ಕೆ ತಂಡಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಹಾಡನ್ನು ರಚಿಸಲಾಗಿದೆ. ಕಳೆದ 10 ಸೀಸನ್ಗಳಲ್ಲಿ ಒಮ್ಮೆಯೂ ಗೆಲ್ಲದ ಆರ್ಸಿಬಿ ತಂಡದ ಬಗ್ಗೆ ಸ್ವಲ್ಪ ವಿಡಂಬನೆಯೂ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ಸಿಬಿ ಗೆಲ್ಲಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.
– ರೂಪೇಶ್ ಶೆಟ್ಟಿ, ಹಾಡಿನ ರಚನೆ ಹಾಗೂ ಗಾಯಕರು
– ಪ್ರಶಾಂತ್ ಪಾದೆ