ಮೊದಲ “ಹಿಂದ್ ಕೇಸರಿ’ ಪುರಸ್ಕೃತ ಕುಸ್ತಿಪಟು ಖಾಂಚನಾಲೆ ಇನ್ನಿಲ್ಲ
Team Udayavani, Dec 15, 2020, 7:24 AM IST
ಪುಣೆ: ದೇಶ ವಿದೇಶಗಳಲ್ಲಿ ಭಾರತದ ಕುಸ್ತಿ ಬಾವುಟ ಹಾರಿಸಿದ, ಭಾರತದ ಪ್ರಪ್ರಥಮ “ಹಿಂದ್ ಕೇಸರಿ’ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು, ಕರ್ನಾಟಕ ಮೂಲದ ಶ್ರೀಪತಿ ಖಾಂಚನಾಲೆ ಸೋಮವಾರ ಕೊಲ್ಹಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. 86 ವರ್ಷದ ಅವರು ಬೆಳಗಾವಿಯ ಎಕ್ಸಂಬಾದವರು.
1959ರಲ್ಲಿ ಅಂದಿನ ಖ್ಯಾತ ಕುಸ್ತಿಪಟು, ರುಸ್ತಮ್-ಎ-ಪಂಜಾಬ್ ಗರಿಮೆಯ ಬಟ್ಟಾಸಿಂಗ್ ಅವರನ್ನು ಪರಾಭವಗೊಳಿಸಿದ ಸಾಹಸಕ್ಕಾಗಿ ಖಾಂಚನಾಲೆ ಅವರಿಗೆ “ಹಿಂದ್ ಕೇಸರಿ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಹೊಸದಿಲ್ಲಿಯ ನ್ಯೂ ರೈಲ್ವೇ ಸ್ಟೇಡಿಯಂನಲ್ಲಿ ಇವರಿಬ್ಬರ ನಡುವಿನ ರೋಚಕ ಸ್ಪರ್ಧೆ ಏರ್ಪಟ್ಟಿತ್ತು. ಅಂದಿನಿಂದ “ಹಿಂದ್ ಕೇಸರಿ’ ಭಾರತೀಯ ಕುಸ್ತಿ ಸಾಧಕರ ಅತ್ಯಂತ ಗೌರವದ ಪ್ರಶಸ್ತಿಯಾಗಿದೆ.
ಶ್ರೀಪತಿ ಅವರ ತಂದೆ ಕೂಡ ಕುಸ್ತಿಪಟು ಆಗಿದ್ದರು. ತಂದೆಯೇ ಅವರನ್ನು ಕುಸ್ತಿ ಅಭ್ಯಾಸಕ್ಕಾಗಿ ಕೊಲ್ಹಾಪುರಕ್ಕೆ ಕಳುಹಿಸಿದ್ದರು.