ನಾವೇನೂ ಅಜೇಯರಲ್ಲ: ವಿರಾಟ್ ಕೊಹ್ಲಿ
Team Udayavani, Jun 10, 2017, 12:23 PM IST
ಲಂಡನ್: “ನಾವೇನೂ ಅಜೇಯರಲ್ಲ…’ ಎನ್ನುವ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಸೋಲನ್ನು ಎತ್ತಿ ಹಿಡಿದಿದ್ದಾರೆ!
“ಪಂದ್ಯದ ಮೊದಲಾರ್ಧದಲ್ಲಿ ನಾವೇ ಮೇಲುಗೈ ಸಾಧಿಸಿದ್ದೆವು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಏಕೆಂದರೆ, ಆಗ ಸ್ಕೋರ್ಬೋರ್ಡ್ನಲ್ಲಿ ನಮ್ಮ ತಂಡ 322ರಷ್ಟು ದೊಡ್ಡ ಮೊತ್ತವನ್ನು ದಾಖಲಿಸಿತ್ತು. ಆದರೆ ಅನಂತರ ಲೆಕ್ಕಾಚಾರ ತಲೆಕೆಳಗಾಯಿತು. ನಮ್ಮ ಬೌಲಿಂಗ್ ವೈಫಲ್ಯ ಅನುಭವಿಸಿತಾದರೂ ತೀರಾ ಕಳಪೆಯಾಗೇನೂ ಇರಲಿಲ್ಲ. ಇಲ್ಲಿ ಹೆಚ್ಚಿನ ಸುಧಾರಣೆ ಅಗತ್ಯವಿದೆ. ಕ್ರೀಸಿಗೆ ಬಂದ ಲಂಕನ್ನರೆಲ್ಲ ಶ್ರೇಷ್ಠ ಮಟ್ಟದ ಬ್ಯಾಟಿಂಗ್ ಪ್ರದರ್ಶನ ವಿತ್ತರು. ಹೀಗಾಗಿ ಇದರ ಶ್ರೇಯವೆಲ್ಲ ಅವರಿಗೇ ಸಲ್ಲುತ್ತದೆ. ನಾವೇನೂ ಅಜೇಯರಲ್ಲ…’ ಎಂದು ಕೊಹ್ಲಿ ಹೇಳಿದರು.
“ಇಲ್ಲಿ ಎಲ್ಲವೂ ಚಾಂಪಿಯನ್ ತಂಡಗಳೇ ಆಗಿವೆ. ಶ್ರೀಲಂಕಾ ಕೂಡ ಇದಕ್ಕೆ ತಕ್ಕ ಪ್ರದರ್ಶನ ನೀಡಿತು. ನಮ್ಮ ವಿಭಾಗದಲ್ಲೀಗ ಸಮಬಲ ನೆಲೆಸಿದೆ. ಎಲ್ಲವೂ ಕ್ವಾರ್ಟರ್ ಫೈನಲ್ ಪಂದ್ಯಗಳಾಗಿವೆ. ಹೀಗಾಗಿ ಸ್ಪರ್ಧೆ ತೀವ್ರಗೊಂಡಿದೆ. ಜತೆಗೆ ಕುತೂಹಲವೂ ಹೆಚ್ಚಿದೆ…’ ಎಂಬು ದಾಗಿ ಕೊಹ್ಲಿ ಅಭಿಪ್ರಾಯಪಟ್ಟರು.
ಲಂಕಾ ಚೇಸಿಂಗ್ ದಾಖಲೆ: “ಕೆನ್ನಿಂಗ್ಟನ್ ಓವಲ್’ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 321 ರನ್ ಪೇರಿಸಿದಾಗ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು. ಏಕೆಂದರೆ ಶ್ರೀಲಂಕಾದ ಬ್ಯಾಟಿಂಗ್ ಸರದಿ ಮೇಲೆ ಯಾರಿಗೂ ಅಷ್ಟೊಂದು ನಂಬಿಕೆ ಇರಲಿಲ್ಲ. ಹಾಗೆಯೇ ಭಾರತದ ಪೇಸ್ ಬೌಲರ್ಗಳು ಉತ್ತಮ ನಿಯಂತ್ರಣ ಸಾಧಿಸ ಬಹುದೆಂದೂ ಭಾವಿಸಲಾಗಿತ್ತು. ಆದರೆ ಈ ಎರಡೂ ಲೆಕ್ಕಾಚಾರಗಳು ಉಲ್ಟಾ ಹೊಡೆದವು. ಶ್ರೀಲಂಕಾ ತನ್ನ ಏಕದಿನ ಇತಿಹಾಸದಲ್ಲೇ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ವಿಜೃಂಭಿಸಿತು.
ಈ ಪಂದ್ಯದಲ್ಲಿ ಭಾರತದ ಕ್ಷೇತ್ರ ರಕ್ಷಣೆ ಕೂಡ ಅತ್ಯಂತ ಕಳಪೆ ಯಾಗಿತ್ತು. ಬೌಲಿಂಗ್ನಲ್ಲಿ 7 ಮಂದಿ ದಾಳಿಗಿಳಿದರೂ ಇವರಲ್ಲಿ ವಿಕೆಟ್ ಹಾರಿಸಿದ್ದು ಭುವನೇಶ್ವರ್ ಕುಮಾರ್ ಮಾತ್ರ. ಅದೂ ಒಂದೇ ವಿಕೆಟ್. ಉಳಿದಿಬ್ಬರು ರನೌಟಾಗಿದ್ದರು.