ವಿಶ್ವ ಆ್ಯತ್ಲೆಟಿಕ್ಸ್ : ದ್ಯುತಿಗೆ ಐಎಎಎಫ್ ಆಹ್ವಾನ
Team Udayavani, Jul 31, 2017, 8:23 AM IST
ಹೊಸದಿಲ್ಲಿ: ದೇಹದಲ್ಲಿ ಆ್ಯಂಡ್ರೊಜನ್ ಪ್ರಮಾಣ ಹೆಚ್ಚಾಗಿ ವಿವಾದಕ್ಕೆ ಸಿಲುಕಿರುವ ವೇಗದ ಓಟಗಾರ್ತಿ ದ್ಯುತಿ ಚಂದ್ ಮುಂಬರುವ ವಿಶ್ವ ಆ್ಯತ್ಲೆಟಿಕ್ಸ್ ಕೂಟದ 100 ಮೀ. ಓಟದಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ. ದ್ಯುತಿ ಅವರಿಗೆ ಸ್ವತಃ ಅಂತಾರಾಷ್ಟ್ರೀಯ ಆ್ಯತ್ಲೆಟಿಕ್ಸ್ ಒಕ್ಕೂಟ (ಐಎಎಎಫ್) ವಿಶೇಷ ಆಹ್ವಾನ ನೀಡಿದೆ. ಹೀಗಾಗಿ ಏಶ್ಯನ್ ಆ್ಯತ್ಲೆಟಿಕ್ಸ್ ಕೂಟದಲ್ಲಿ ದ್ಯುತಿ ಕಂಚಿನ ಪದಕ ಗೆದ್ದಿದ್ದ ದ್ಯುತಿ ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ದ್ಯುತಿ ಚಂದ್ ಏಶ್ಯನ್ ಕೂಟದಲ್ಲಿ ವಿಶ್ವ ಅರ್ಹತಾ ಸಮಯದಲ್ಲಿ ಗುರಿ ತಲುಪಿರಲಿಲ್ಲ. ಹೀಗಿದ್ದರೂ ಅವರಿಗೆ ವಿಶ್ವ ಕೂಟಕ್ಕೆ ಆಹ್ವಾನ ದೊರೆತಿರುವುದಕ್ಕೆ ಒಂದು ಕಾರಣವಿದೆ. ಅದೇನೆಂದರೆ, ವಿಶ್ವ ಮಟ್ಟದಲ್ಲಿ 100 ಮೀ. ವಿಭಾಗದಲ್ಲಿ ಒಟ್ಟು 56 ಮಂದಿಗೆ ಸ್ಪರ್ಧಿಸಲು ಅವಕಾಶವಿದೆ. ಅಷ್ಟು ಮಂದಿ ವಿಶ್ವ ಮಟ್ಟದಿಂದ ಅರ್ಹತೆ ಪಡೆದಿಲ್ಲವಾದ್ದರಿಂದ ದ್ಯುತಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಈ ವಿಷಯವನ್ನು ಭಾರತೀಯ ಆ್ಯತ್ಲೆಟಿಕ್ಸ್ ಒಕ್ಕೂಟದ ಅಧ್ಯಕ್ಷ ಆದಿಲ್ ಸುಮರಿವಾಲ ಸ್ಪಷ್ಟಪಡಿಸಿದ್ದಾರೆ. “ಅಂತಾರಾಷ್ಟ್ರೀಯ ಆ್ಯತ್ಲೆಟಿಕ್ಸ್ ಒಕ್ಕೂಟದಿಂದ ನಮಗೆ ದ್ಯುತಿ ಅವರನ್ನು ಕಳುಹಿಸಲು ಆಹ್ವಾನ ಬಂದಿದೆ. ಇದನ್ನು ನಾವು ಸ್ವೀಕರಿಸಿದ್ದೇವೆ. ಹಸಿರು ನಿಶಾನೆ ನೀಡಿದ್ದೇವೆ…’ ಎಂದು ಅವರು ತಿಳಿಸಿದರು.
ದ್ಯುತಿ ಆ್ಯಂಡ್ರೋಜನ್ ಪ್ರಕರಣವನ್ನು ಇದೇ ಐಎಎಎಫ್ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದಲ್ಲಿ ಮತ್ತೆ ಪ್ರಶ್ನಿಸುವುದಾಗಿ ಹೇಳಿತ್ತು. ಈಗ ಅದೇ ಒಕ್ಕೂಟ ದ್ಯುತಿಗೆ ಆಹ್ವಾನ ನೀಡಿರುವುದು ವಿಶೇಷ!