558 ಚೀಲ ಅಕ್ರಮ ಪಡಿತರ ಅಕ್ಕಿ ವಶ
Team Udayavani, Aug 19, 2019, 3:00 AM IST
ಹರಪನಹಳ್ಳಿ: ಎರಡು ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 558 ಚೀಲ ಪಡಿತರ ಅಕ್ಕಿಯನ್ನು ಪಟ್ಟಣದ ಹೊರವಲಯದಲ್ಲಿ ಪೊಲೀಸರು ಶನಿವಾರ ಸಂಜೆ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ನೆಲಮಂಗಲ ಮೂಲದ ಲಾರಿ ಚಾಲಕರಾದ ಅನಿಲಕುಮಾರ್ (20), ಸುರೇಶ್ (26) ಬಂಧಿತ ಆರೋಪಿಗಳು. ಅಕ್ಕಿಯನ್ನು ಗಂಗಾವತಿಯಿಂದ ತುಮ ಕೂರಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಈ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿಪಿಐ ಕೆ.ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಹಡಗಲಿ ರಸ್ತೆಯ ಆದಿ ದುರುಗಮ್ಮ ದೇವಸ್ಥಾನ ಬಳಿಯಿರುವ ಟೋಲ್ಗೇಟ್ ಬಳಿ ಲಾರಿ ತಡೆದು ಪರಿಶೀಲಿಸಿದೆ. ಎರಡು ಲಾರಿಗಳಲ್ಲಿದ್ದ ಒಟ್ಟು 558 ಚೀಲ ಪಡಿತರ ಅಕ್ಕಿ ಹಾಗೂ ಚಾಲಕರನ್ನು ವಶಕ್ಕೆ ಪಡೆದುಕೊಂಡಿದ್ದು, ಅಕ್ಕಿ ಮೌಲ್ಯ ಒಟ್ಟು 5,90,592ರೂ ಎಂದು ಅಂದಾಜಿಸ ಲಾಗಿದೆ.
ಗಂಗಾವತಿ ಮಹೇಶ್ ಎಂಬುವವರಿಂದ ಅಕ್ಕಿ ಪಡೆದುಕೊಂಡಿದ್ದು, ತುಮಕೂರಿನ ಕರಿಗಿರಿ ನರಸಿಂಹ ಟ್ರೇಡರ್ ಮಾಲೀಕರ ಎಪಿಎಂಸಿ ಯಾರ್ಡ್ಗೆ ಅಕ್ಕಿ ರವಾನಿಸುತ್ತಿರುವಾಗಿ ಚಾಲಕರು ಒಪ್ಪಿಕೊಂಡಿದ್ದಾರೆ. ಗಂಗಾವತಿ ಎಸ್.ಮಹೇಶ್, ತುಮಕೂರು ಕರಿಗಿರಿ ನರಸಿಂಹ ಎಂಬುವವರ ವಿರುದ್ಧ ತಾಲೂಕು ಆಹಾರ ನಿರೀಕ್ಷಕರು ದೂರು ದಾಖಲಿಸಿದ್ದಾರೆ.